ದೇಶ

ಡಿಜಿಟಲ್ ಅಪರಾಧ ಪತ್ತೆಗೆ ಹೊಸ ಮಾರ್ಗ ಹುಡುಕಿ: ಹೊಸ ಐಪಿಎಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಕರೆ

Lingaraj Badiger

ನವದೆಹಲಿ: ಮುಂದಿನ 25  ವರ್ಷಗಳಲ್ಲಿ ದೇಶವನ್ನು ಸುರಾಜ್ಯ ಮಾಡಲು ಐಪಿಎಸ್ ಪ್ರೊಬೇಷನ್ ಅಧಿಕಾರಿಗಳು ಅವಿರತವಾಗಿ
ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಒತ್ತಿ ಹೇಳಿದ್ದಾರೆ.

ಹೈದರಾಬಾದ್ ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿನಿರತ ಭಾರತೀಯ ಪೊಲೀಸ್ ಸೇವೆ-ಐಪಿಎಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಸಂವಾದ ನಡೆಸಿದ ಪ್ರಧಾನಿ, ಪ್ರಸ್ತುತ ಹಣಕಾಸು ಮತ್ತು ಡಿಜಿಟಲ್ ಅಪರಾಧಗಳು ಸರ್ಕಾರಗಳಿಗೆ ಅತಿದೊಡ್ಡ ಸವಾಲು ಒಡ್ಡಿದ್ದು, ಇಂತಹ ಅಪರಾಧಗಳನ್ನು ತಡೆಯಲು ಯುವ ಪೊಲೀಸ್ ಅಧಿಕಾರಿಗಳು ಹೊಸ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದರು.
 
ಯುವ ವೃತ್ತಿಪರರು ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು. ಆಂತರಿಕ ಭದ್ರತೆ
ಕಾಯ್ದುಕೊಳ್ಳುವಲ್ಲಿ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದ ಪ್ರಧಾನಿ, ಬುಡಕಟ್ಟು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿದ್ದು, ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಲಾಗಿದೆ ಎಂದರು.

ನಿಮ್ಮ ಹವ್ಯಾಸಗಳು ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲು ಸಹಾಯ ಮಾಡುತ್ತವೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ನಿರ್ಧಾರ ಮತ್ತು ಕೆಲಸಗಳನ್ನು ಕೈಗೊಳ್ಳಿ ಎಂದು ಪ್ರಧಾನಿ ಕಿವಿಮಾತು ಹೇಳಿದರು.

ಜನರಲ್ಲಿ ಪೊಲೀಸರ ಬಗೆಗಿರುವ ನಕಾರಾತ್ಮಕ ಗ್ರಹಿಕೆಯನ್ನು ಬದಲಾಯಿಸುವುದು ದೊಡ್ಡ ಸವಾಲು. ಆದರೆ, ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಪೊಲೀಸ್‌ ಸಿಬ್ಬಂದಿ ಸಹಾಯ ಮಾಡುತ್ತಿರುವುದನ್ನು ಜನರು ಗಮನಿಸಿದ್ದರು. ಆಗ ಪೊಲೀಸರ ಬಗೆಗಿನ ಜನರ ಭಾವನೆ ಸ್ವಲ್ಪ ಮಟ್ಟಿಗೆ ಬದಲಾಗಿತ್ತು. ಆದರೆ ಈಗ ಮತ್ತೆ ಜನರಲ್ಲಿ ನಕಾರಾತ್ಮಕ ಗ್ರಹಿಕೆ ಮನೆ ಮಾಡಿದೆ ಎಂದು ಮೋದಿ ಹೇಳಿದರು.

SCROLL FOR NEXT