ಪ್ರಧಾನಿ ಮೋದಿ 
ದೇಶ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಜೂನ್ 21ರಿಂದ ಕೇಂದ್ರದಿಂದಲೇ ಉಚಿತ ಕೋವಿಡ್ ಲಸಿಕೆ: ಪ್ರಧಾನಿ ಮೋದಿ

ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕುರಿತು ಗೊಂದಲವನ್ನು ಬಗೆಹರಿಸಿರುವ ಪ್ರಧಾನಿ ನರೇಂದ್ರ ಮೋದಿ ಜೂ 21ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.

ನವದೆಹಲಿ: ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕುರಿತು ಗೊಂದಲವನ್ನು ಬಗೆಹರಿಸಿರುವ ಪ್ರಧಾನಿ ನರೇಂದ್ರ ಮೋದಿ ಜೂ 21ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.

ಗುರುವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಸಕ್ತ ಶತಮಾನದ ಮಹಾಮಾರಿ ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಸಿಕೀಕರಣವೇ ಮಹಾಮದ್ದು, ದೇಶಾದ್ಯಂತ ಶೇ. 100ರಷ್ಟು ಲಸಿಕೆ ಪೂರೈಕೆಗೆ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ಲಸಿಕಾ ಕಂಪನಿಗಳಿಂದ ಲಸಿಕೆ ಖರೀದಿಸಿ ಎಲ್ಲಾ ರಾಜ್ಯಗಳಿಗೂ ಹಂಚಲಿದೆ. ಜೊತೆಗೆ, ಜೂ 21ರಿಂದ ಲಸಿಕೆ ನೀಡುವ ನಿಟ್ಟಿನಲ್ಲಿ ಶೀಘ್ರವೇ ಪ್ರತ್ಯೇಕ ಮಾರ್ಗಸೂಚಿ ಹೊರಬೀಳಲಿದೆ. ದೇಶಾದ್ಯಂತ ಉಚಿತ ಲಸಿಕೆ ನೀಡಲಾಗುವುದು.

ಸರ್ಕಾರಕ್ಕೆ ಹೊರೆಯಾಗಬಾರದು ಎಂದು ಭಾವಿಸುವ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ಖಾಸಗಿ ಆಸ್ಪತ್ರೆಗೆ ಶೇಕಡ 25ರಷ್ಟು ಲಸಿಕೆ ಖರೀದಿಸಲು ಅವಕಾಶ ನೀಡಲಾಗುವುದು. ಇನ್ನು ಖಾಸಗಿ ಆಸ್ಪತ್ರೆಯವರು ಲಸಿಕೆ ಪಡೆಯುವವರಿಂದ 150 ರೂ. ಮಾತ್ರ ಪಡೆಯಬೇಕು ಎಂದರು.

ದೀಪಾವಳಿವರೆಗೆ ಉಚಿತ ಪಡಿತರ:
ಕಳೆದ ಏಪ್ರಿಲ್ನಲ್ಲಿ ಘೋಷಣೆಯಾದ ಲಾಕ್ ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ, ಬಡಜನರಿಗೆ ಉಚಿತ ಪಡಿತರ ವಿತರಿಸುವ ಪ್ರಧಾನ ಮಂತ್ರಿ ಗರೀಬ್ ಅನ್ನ ಯೋಜನೆಯನ್ನು ದೀಪಾವಳಿವರೆಗೆ ಅಂದರೆ, ನವೆಂಬರ್ ತಿಂಗಳವರೆಗೆ ವಿಸ್ತರಿಸಲಾಗುವುದು. ಈ ಯೋಜನೆಯಡಿ ಬಡಜನರಿಗೆ ಪ್ರತಿ ತಿಂಗಳು ಉಚಿತ ಪಡಿತರ ದೊರೆಯಲಿದೆ ಎಂದರು. ಕಳೆದ ವರ್ಷ ಏಪ್ರಿಲ್, ಮೇ ತಿಂಗಳಿಗಾಗಿ ಆರಂಭಿಸಲಾಗಿದ್ದ ಈ ಯೋಜನೆಯನ್ನು ನಂತರ ವಿಸ್ತರಿಸಲಾಗಿತ್ತು. ಮಹಾಮಾರಿಯ ಸಮಯದಲ್ಲಿ ಸರ್ಕಾರ ಬಡವರ ಜೊತೆಗಿದೆ.ಯಾವುದೇ ಬಡ ಸಹೋದರರು ಹಸಿವಿನಿಂದ ಮಲಗಬಾರದು ಎಂಬುದು ಇದರ ಉದ್ದೇಶ ಎಂದು ಹೇಳಿದರು.

7 ಕಂಪನಿಗಳಿಂದ ಲಸಿಕೆ ತಯಾರಿಕೆ:
ದೇಶದಲ್ಲಿ ಅತ್ಯಂತ ವೇಗವಾಗಿ ಲಸಿಕೆಗಳು ತಯಾರಾಗುತ್ತಿವೆ. ಇಡೀ ವಿಶ್ವವೇ ನಿಬ್ಬೆರಗಾಗುವಂತೆ ನಮ್ಮ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲಿನ ವಿಶ್ವಾಸದಿಂದ 2020ರ ಏಪ್ರಿಲ್ ನಲ್ಲಿ ಸಂಶೋಧನೆ ನಡೆಯುತ್ತಿದ್ದಾಗಲೇ ಲಾಜಿಸ್ಟಿಕ್ ಇತರ ತಯಾರಿ ಆರಂಭಿಸಿದ್ದೆವು. ಅದಕ್ಕಾಗಿ ಲಸಿಕಾ ಟಾಸ್ಕ್ ಫೋರ್ಸ್ ಕೂಡ ರಚಿಸಲಾಗಿತ್ತು. ಸಂಶೋಧನೆಗೆ ಅಗತ್ಯ ಹಣ ನೀಡಲಾಯಿತು ಎಂದರು. ಈಗ ದೇಶದಲ್ಲಿ ಏಳು ಕಂಪನಿ ವಿಭಿನ್ನ ಪ್ರಕಾರದ ಲಸಿಕೆ ತಯಾರಿಸುತ್ತಿವೆ. 3 ಲಸಿಕೆ ಅಡ್ವಾನ್ಸ್ ಹಂತದಲ್ಲಿ ಪ್ರಯೋಗ ನಡೆಯುತ್ತಿದೆ. ಜೊತೆಗೆ, ಜನರಿಗೆ ಅಗತ್ಯ ಪ್ರಮಾಣದ ಬೇರೆ ದೇಶಗಳಿಂದ ಲಸಿಕೆ ಖರೀದಿಸುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ ಎಂದರು.

ಮಕ್ಕಳಿಗೂ ಲಸಿಕೆ ತಯಾರಿ:
ಕೋವಿಡ್-19 ಮೂರನೇ ಅಲೆಯಲ್ಲಿ ಮಕ್ಕಳಿಗೆ ಹಾನಿಯಾಗಲಿದೆ ಎಂಬ ತಜ್ಞರ ಹೇಳಿಕೆಯಿಂದ ಜನರು ಆತಂಕಪಡುವ ಅಗತ್ಯವಿಲ್ಲ. ಅದಕ್ಕಾಗಿಯೇ ಮಕ್ಕಳಿಗಾಗಿ ಲಸಿಕೆ ತಯಾರಿಸಲಾಗುತ್ತಿದ್ದು, ಪ್ರಯೋಗದ ಹಂತದಲ್ಲಿವೆ. ಒಂದು ನೇಸಲ್ ಲಸಿಕೆ ಕುರಿತು ಸಂಶೋಧನೆ ನಡೆಯುತ್ತಿದೆ. ಇದು ಮೂಗಿನಲ್ಲಿ ಸ್ಪ್ರೇ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರಲ್ಲಿ ಸಫಲತೆ ದೊರೆತರೆ ಅದು ಲಸಿಕಾ ಅಭಿಯಾನಕ್ಕೆ ವೇಗ ನೀಡಲಿದೆ ಎಂದರು.ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ತಯಾರಿಸುವುದು ಮಾನವತೆಗೆ ಒಂದು ದೊಡ್ಡ ಕೊಡುಗೆಯಾಗಿದೆ.ಅದಕ್ಕೆ ಅದರ ಮಿತಿ ಕೂಡ ಇದೆ.

ಲಸಿಕೆ ತಯಾರಿಸಿದ ನಂತರ ಕೂಡ ದೇಶದ ಅತ್ಯಂತ ಕಡಿಮೆ ದೇಶಗಳಲ್ಲಿ ಲಸಿಕೀಕರಣ ಆರಂಭವಾಗಿದೆ. ಡಬ್ಲ್ಯುಎಚ್ಒ  ಈ ಸಂಬಂಧ ಮಾರ್ಗಸೂಚಿ ಕೂಡ ನೀಡಿದೆ. ಲಸಿಕೆಯ ಒಂದು ಡೋಸ್ ಕೂಡ ಎಷ್ಟು ಮಹತ್ವ ಎಂಬುದನ್ನು ನಾವು ಅರಿತಿದ್ದೇವೆ. ಪ್ರತಿ ಡೋಸ್ ನೊಂದಿಗೆ ಒಂದು ಜೀವ ಉಳಿಯಬಹುದು ಎಂದರು. ಇನ್ನು ಜನರಲ್ಲಿ ಗೊಂದಲ ತಪ್ಪಿಸುವ ಸಲುವಾಗಿ ರಾಜ್ಯಗಳಿಗೆ ಒಂದು ವಾರ ಮುಂಚೆಯೇ ಯಾವಾಗ ಎಷ್ಟು ಡೋಸ್ ದೊರೆಯಲಿದೆ ಎಂಬ ವಿವರ ನೀಡಲಾಗುತ್ತಿದೆ ಎಂದು ಹೇಳಿದರು.

ಆದರೆ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಲಸಿಕೆ ಕುರಿತು ರಾಜಕೀಯ ಹೇಳಿಕೆಗಳನ್ನು ಯಾರು ಮೆಚ್ಚುವುದಿಲ್ಲ. ಲಸಿಕೆ ಕುರಿತು ಕೆಲವರು ಹುಟ್ಟಿಸುವ ಭ್ರಮೆ, ಅಪಪ್ರಚಾರಗಳು ಚಿಂತೆಗೀಡು ಮಾಡುತ್ತಿವೆ. ಲಸಿಕೆ ಕುರಿತು ದೇಶದಲ್ಲಿ ಕೆಲಸ ಆರಂಭಿಸಿದಾಗಿಲಿನಿಂದ ಆ ಕುರಿತು ಜನರಲ್ಲಿ ಶಂಕೆ ಮೂಡಿಸುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಲಸಿಕೆ ಹಾಕದಂತೆ ವಾದ-ವಿವಾದ ಮಾಡಲಾಯಿತು. ಅದನ್ನು ದೇಶ ನೋಡುತ್ತಿದೆ. ಯುವಕರು ಇಂತಹ ಹೇಳಿಕೆಗಳನ್ನು ನಂಬಬಾರದು. ಜಾಗೃತಿ ಮೂಡಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT