ದೇಶ

ಭಾರತದಲ್ಲಿ ಹೊಸ ಐಟಿ ಕಾನೂನು: ಕುಂದುಕೊರತೆಗಳನ್ನು ಆಲಿಸಲು ಅಧಿಕಾರಿಯನ್ನು ನೇಮಿಸಿದ ಫೇಸ್ ಬುಕ್! 

Srinivas Rao BV

ನವದೆಹಲಿ: ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ತನ್ನ ಗ್ರಾಹಕರಿಗೆ ಕುಂದು-ಕೊರತೆ, ದೂರುಗಳನ್ನು ಆಲಿಸುವುದಕ್ಕಾಗಿ ಪ್ರತ್ಯೇಕ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ.

ಭಾರತ ಹೊಸ ಐಟಿ ಕಾನೂನನ್ನು ಜಾರಿಗೊಳಿಸಿದ ಬೆನ್ನಲ್ಲೇ ಫೇಸ್ ಬುಕ್ ಈ ಕ್ರಮ ಕೈಗೊಂಡಿದೆ. 50 ಲಕ್ಷಕ್ಕೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣಗಳು ದೂರು ನೀಡುವ ಪ್ರತ್ಯೇಕ ಅಧಿಕಾರಿಗಳನ್ನು, ನೋಡಲ್ ಅಧಿಕಾರಿಗಳನ್ನು ಹೊಂದಿರಬೇಕೆಂಬ ನಿಯಮವನ್ನು ವಿಧಿಸಿತ್ತು.

ಈ ಹಿನ್ನೆಲೆಯಲ್ಲಿ ಸ್ಪೂರ್ತಿ ಪ್ರಿಯಾ ಅವರನ್ನು ದೂರು ಸ್ವೀಕರಿಸುವ ಅಧಿಕಾರಿಯನ್ನಾಗಿ ಫೇಸ್ ಬುಕ್ ನೇಮಕ ಮಾಡಿದೆ. ಫೇಸ್ ಬುಕ್ ನ ವೆಬ್ ಸೈಟ್ ನ ಮಾಹಿತಿಯ ಪ್ರಕಾರವಾಗಿ ಸ್ಫೂರ್ತಿ ಪ್ರಿಯಾ ಅವರನ್ನು ಗ್ರಾಹಕರು ಇ-ಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.

ಇ-ಮೇಲ್ ಇಲ್ಲದಿದ್ದಲ್ಲಿ ಭಾರತದಲ್ಲಿ ಫೇಸ್ ಬುಕ್ ನ್ನು ನವದೆಹಲಿಯಲ್ಲಿನ ವಿಳಾಸದಲ್ಲಿರುವ ಭಾರತದ ಕಚೇರಿಯನ್ನು ಪೋಸ್ಟ್ ಮೂಲಕವೂ ತಲುಪಬಹುದಾಗಿದೆ. ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ಸಹ ಇತ್ತೀಚೆಗಷ್ಟೇ ಪರೇಶ್ ಬಿ ಲಾಲ್ ಅವರನ್ನು ಭಾರತದಲ್ಲಿ ದೂರುಗಳನ್ನು ಆಲಿಸುವ ಅಧಿಕಾರಿಯನ್ನಾಗಿ ನೇಮಕ ಮಾಡಿರುವುದಾಗಿ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ಹೊಸ ನೀತಿಗಳನ್ನು ಪಾಲಿಸುವುದಕ್ಕೆ ಫೇಸ್ ಬುಕ್ ಕಳೆದ ವಾರ ಮಹತ್ವದ ಬದಲಾವಣೆಗಳನ್ನು ಘೋಷಿಸಿತ್ತು.

SCROLL FOR NEXT