ದೇಶ

ಕಾನ್ಪುರ: ಬಸ್-ಆಟೋ ಢಿಕ್ಕಿ, 17 ಮಂದಿ ಸಾವು; ಪ್ರಧಾನಿ ಮೋದಿ ಸಾಂತ್ವನ, ಪರಿಹಾರ ಘೋಷಣೆ

Srinivasamurthy VN

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕ ಬಸ್ ಮತ್ತು ಆಟೋ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದ ಉಪನಗರ ಸಚೆಂದಿಯಲ್ಲಿ ಬಸ್ ಮತ್ತು ಆಟೊ ಮಂಗಳವಾರ ಮುಖಾಮುಖಿಯಾಗಿ 17 ಮಂದಿ ಮೃತಪಟ್ಟಿದ್ದು, 30 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಲಾಲಾ ಲಜಪತ್​ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.  ಹೀಗಾಗಿ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಪೊಲೀಸರು ಹೇಳಿದ್ದಾರೆ.

ಲಖನೌ ನಿಂದ ದೆಹಲಿಗೆ ಬಸ್ ಪ್ರಯಾಣಿಸುತ್ತಿತ್ತು. ಈ ವೇಳೆ ಕಾನ್ಪುರದ ಉಪನಗರ ಸಚೆಂದಿಯಲ್ಲಿ ಬಸ್ ಆಟೋಗೆ ಢಿಕ್ಕಿ ಹೊಡೆದಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಕುರಿತು ಮಾಹಿತಿ ನೀಡಿದ ಉತ್ತರಪ್ರದೇಶ ಐಜಿ  ಮೋಹಿತ್ ಅಗರ್ವಾಲ್ ಅವರು, ನಾಲ್ಕು ಮಂದಿ ಗಾಯಾಳುಗಳಿಗೆ ಹ್ಯಾಲೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, 20ಕ್ಕೂ ಅಧಿಕ ಮಂದಿ ಗಾಯಾಳುಗಳನ್ನು ಲಾಲಾ ಲಜಪತ್​ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ಸಾಂತ್ವನ, ಪರಿಹಾರ ಘೋಷಣೆ ಮಾಡಿದ ಪ್ರಧಾನಿ ಮೋದಿ
ಇನ್ನು ಕಾನ್ಪುರ ಅಪಘಾತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಘೋಷಣೆ ಮಾಡಿದ್ದು, ಅಪಘಾತದಲ್ಲಿ ಮೃತರಾದವರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ ಘೋಷಣೆ ಮಾಡಿದ್ದಾರೆ. ಅಂತೆಯೇ ಮೃತರ ಕುಟುಂಬಕ್ಕೆ ನೋವು  ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ.. ಗಾಯಾಳುಗಳು ಬೇಗನೇ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

SCROLL FOR NEXT