ದೇಶ

ಮೋದಿ ತಪ್ಪು ಒಪ್ಪಿಕೊಂಡರೆ ಮಾತ್ರ ದೇಶ ಪುನರ್ ನಿರ್ಮಾಣ ಸಾಧ್ಯ: ರಾಹುಲ್ ಗಾಂಧಿ 

Nagaraja AB

ನವ ದೆಹಲಿ:  ಪ್ರಧಾನಿ ನರೇಂದ್ರ ಮೋದಿ ತಮ್ಮ  ತಪ್ಪುಗಳನ್ನು ಒಪ್ಪಿಕೊಂಡು, ಬಳಿಕ ತಜ್ಞರ ಸಲಹೆಯಂತೆ ನಡೆದಾಗ ಮಾತ್ರ ದೇಶದ ಪುನರ್ ನಿರ್ಮಾಣ ಸಾಧ್ಯವಾಗಲಿದೆ ಎಂದು ಯುವ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ  ರಾಹುಲ್, ನಿರಾಕರಣೆಯಲ್ಲಿಯೇ ಬದುಕುವುದರಿಂದ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ ಎಂದು ರಾಹುಲ್ ನಯವಾಗಿ ತಿರುಗೇಟು ನೀಡಿದ್ದಾರೆ.

ಕೊರೋನ ನಿರ್ವಹಣೆಯಲ್ಲಿ ಮೋದಿ ಸರ್ಕಾರ ಎಡವಿದೆ ಎಂಬ ಆರೋಪಗಳು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸೋಂಕಿನ ಕಾರಣದಿಂದಾಗಿ ಇಡೀ ವಿಶ್ವದ ನಾಗರಿಕ ವ್ಯವಸ್ಥೆ ಅಡಿಮೇಲಾಗಿದ್ದು, ಜಾಗತಿಕವಾಗಿ ಬಡತನದ ಮಟ್ಟ ಏರಿಕೆಯಾಗಿದೆ ಹಾಗೂ ಸಾಮಾನ್ಯ ಮಧ್ಯಮ ವರ್ಗದವರ ಆದಾಯ ಇಳಿಮುಖವಾಗುತ್ತಿದೆ.

ಜಾಗತಿಕ ಬಡತನಕ್ಕೆ ಭಾರತದ ಶೇಕಡಾ 50ಕ್ಕಿಂತ ಹೆಚ್ಚು ಕೊಡುಗೆ ಇದೆ ಎಂಬ ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆಯೊಂದರ ವರದಿಯ ತುಣಕಿನ ಜೊತೆಗೆ ಟ್ವೀಟ್ ಮಾಡಿದ್ದಾರೆ.

ಇದು ಕೇಂದ್ರ ಕರೋನ ನಿರ್ವಹಣೆಯಲ್ಲಿ ಮಾಡಿರುವ ಕೆಟ್ಟ ನಿರ್ವಹಣೆಯ ಫಲಿತಾಂಶ ಎಂದು ರಾಹುಲ್ ಹೇಳಿದ್ದಾರೆ. ನಾವು ಈಗ ಭವಿಷ್ಯ ನೋಡಬೇಕು. ಪ್ರಧಾನಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಾಗ ಮಾತ್ರ ದೇಶದ ಪುನರ್ ನಿರ್ಮಾಣ ಸಾಧ್ಯವಾಗಲಿದೆ ಎಂದರು.

SCROLL FOR NEXT