ದೇಶ

ನವೆಂಬರ್ ಅಂತ್ಯದವರೆಗೂ ಉಚಿತ ಪಡಿತರ ಯೋಜನೆ ಮುಂದುವರಿಕೆ: ಕೇಂದ್ರ ಸರ್ಕಾರ

Srinivasamurthy VN

ನವದೆಹಲಿ: ಮಾರಕ ಕೊರೋನಾ ಸಾಂಕ್ರಾಮಿಕ 2ನೇ ಅಲೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ನವೆಂಬರ್ ತಿಂಗಳ ಅಂತ್ಯದವರೆಗೂ ಉಚಿತ ಪಡಿತರ ವಿತರಣೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ಈ ಕುರಿತಂತೆ ಬುಧವಾರ ನಡೆದ ಕೇಂದ್ರ ಸಂಪುಟಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKAY) ಅಡಿಯಲ್ಲಿ ವಿತರಿಸಲಾಗುವ ಉಚಿತ ಪಡಿತರವನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಣೆ ಮಾಡಲು ಸಂಪುಟ ಅನುಮೋದನೆ ನೀಡಿದೆ. ಸರ್ಕಾರದ ಈ  ನಿರ್ಣಯದಿಂದ ದೇಶದ ಸುಮಾರು 80 ಕೋಟಿ ಫಲಾನುಭವಿಗಳು ಇನ್ನೂ 5 ತಿಂಗಳು ಹೆಚ್ಚುವರಿ ಅಂದರೆ ನವೆಂಬರ್ ಅಂತ್ಯದವರೆಗೂ ಉಚಿತ ಪಡಿತರ ಪಡೆಯಬಹುದಾಗಿದೆ.

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಬಡ ಪಿಡಿಎಸ್ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಫಲಾನುಭವಿಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಕಡಿಮೆ ಮಾಡುವ ಸಲುವಾಗಿ ಈ ವರ್ಷದ ಜೂನ್‌ವರೆಗೆ ಎರಡು ತಿಂಗಳ ಕಾಲ ಪಿಎಂಜಿಕೆ ಯೋಜನೆಯನ್ನು  ಪುನಃ ಪರಿಚಯಿಸಲಾಗಿತ್ತು. ಆದರೆ ಇದೀಗ  ಈ ಯೋಜನೆಯನ್ನು ಮತ್ತೆ 5 ತಿಂಗಳುಗಳಿಗೆ ವಿಸ್ತರಿಸಲಾಗಿದೆ.

ಈ ಹಿಂದೆ ಜೂನ್ 7ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಪ್ರತಿಯೊಬ್ಬ ಬಡ ನಾಗರಿಕರೊಂದಿಗೆ ಸರ್ಕಾರವೂ ಜೊತೆಗಿರುತ್ತದೆ. ನವೆಂಬರ್‌ವರೆಗೆ ಎಲ್ಲ 80 ಕೋಟಿ ಮಂದಿಗೆ, ಉಚಿತವಾಗಿ ಧಾನ್ಯ ವಿತರಿಸಲಾಗುತ್ತದೆ. ಈ ಯೋಜನೆಯು ದೀಪಾವಳಿವರೆಗೂ ಮುಂದುವರಿಯಲಿದೆ ಎಂದು  ಹೇಳಿದ್ದರು.

SCROLL FOR NEXT