ನವದೆಹಲಿ: ಆಟಿಕೆಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಲು ಆಟಿಕೆ ರೂಪಿಸುವವರು ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಟಾಯ್ ಕಾ ಥಾನ್-2021 ಸ್ಪರ್ಧೆಯಲ್ಲಿ ಪಾಲ್ಗೊಂಡವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ, ಕುರುಕಲು ತಿಂಡಿಗಳ ಸೇವನೆಯಿಂದ ಉಂಟಾಗುವ ಸಮಸ್ಯೆಗಳು, ಸೂಕ್ತ ಆಹಾರ ಸೇವನೆ, ಪೌಷ್ಟಿಕಾಂಶದ ಮಹತ್ವ ಮತ್ತಿತರ ಅಂಶಗಳ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ, ಜ್ಞಾನ ಮೂಡಿಸುವಂತಹ ಆಟಿಕೆಗಳನ್ನು ರೂಪಿಸಲು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಆಟಿಕೆಗಳು ಹಾಗೂ ಕ್ರೀಡೆಗಳು ನಮ್ಮ ನಿರ್ಣಾಯಕ ಆಲೋಚನೆಗಳ ಸೃಜನಶೀಲತೆಯನ್ನು ಹೆಚ್ಚಿಸುವುದಲ್ಲದೆ, ಆಟಿಕೆ ಆರ್ಥಿಕತೆಯ ಮೂಲಕ ದೇಶದ ಆರ್ಥಿಕತೆ ವೃದ್ಧಿಸಲಿದೆ ಎಂದು ಪ್ರಧಾನಿ ನುಡಿದರು.
ಧೈರ್ಯ ಸಮೃದ್ದಿಯ ಪ್ರಮುಖ ಸಾಧನವಾಗಿದ್ದು, ಎಲ್ಲಾ ಸ್ಪರ್ಧಿಗಳು ಆಟಿಕೆ ತಯಾರಿಕೆಯಲ್ಲಿ ಭಾರತದ ಉಜ್ವಲ ಭವಿಷ್ಯವನ್ನು ಅನಾವರಣಗೊಳಿಸಿದ್ದಾರೆ. ನಮ್ಮ ಯುವ ಜನರು ಆತ್ಮ ನಿರ್ಭರ ಭಾರತ ಅಭಿಯಾನವನ್ನು ಬಲಪಡಿಸಲು ಯಾವ ಕೊಡುಗೆ ನೀಡಬಹುದು ಎಂಬುದನ್ನು ತೋರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ಆಟಿಕೆ ಸಾಮಾನುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ವ್ಯಾಪಕ ಪಾಲು ಹೊಂದಲು ಟಾಯ್ಕಾಥಾನ್-2021 ನೆರವಾಗಲಿದೆ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ತನ್ನ ಬಹುತೇಕ ಆಟಿಕೆ ಸಾಮಾನುಗಳನ್ನು ಆಮದು ಮಾಡಿಕೊಳ್ಳುತ್ತದೆ, ದೇಶಿಯವಾಗಿ ತಯಾರಾಗುವ ಆಟಿಕೆ ಸಾಮಾನುಗಳಿಗೆ ಪ್ರೋತ್ಸಾಹ ನೀಡುವತ್ತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು, ಶಿಕ್ಷಕರು, ತಜ್ಞರು ಹಾಗೂ ನವೋದ್ಯಮಗಳಿಗೆ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಯೋಚನೆಗಳನ್ನು ಕಲೆ ಹಾಕಲು ಟಾಯ್ಕಾಥಾನ್ 2021 ಎಂಬ ಹ್ಯಾಕಾಥಾನ್ ಸ್ಪರ್ಧೆ ಆಯೋಜಿಸಿತ್ತು.
ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜವಳಿ, ವಾಣಿಜ್ಯ ಮತ್ತು ಉದ್ಯಮ, ಎಂಎಸ್ಎಂಇ, ಮಾಹಿತಿ ಮತ್ತು ಪ್ರಸಾರ ಇಲಾಖೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಜಂಟಿಯಾಗಿ ಆಯೋಜಿಸಿತ್ತು. ಭಾರತದಾದ್ಯಂತ ಸುಮಾರು 1.2 ಲಕ್ಷ ಮಂದಿ ನೋಂದಾಯಿಸಿ 17,000ಕ್ಕೂ ಹೆಚ್ಚು ಕಲ್ಪನೆಗಳನ್ನು ಸಲ್ಲಿಸಿದ್ದರು ಕೊರೊನಾ ನಿರ್ಬಂಧಗಳಿಂದಾಗಿ ಈ ಗ್ರ್ಯಾಂಡ್ ಫಿನಾಲೆ ಡಿಜಿಟಲ್ ಆಟಿಕೆ ಕಲ್ಪನೆ ಹೊಂದಿರುವ ತಂಡಗಳನ್ನು ಹೊಂದಿದ್ದು ಡಿಜಿಟಲ್ ಅಲ್ಲದ ಆಟಿಕೆ ಪರಿಕಲ್ಪನೆಗಳಿಗಾಗಿ ಪ್ರತ್ಯೇಕ ಭೌತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ.