ಜಮ್ಮು: ಜಮ್ಮುವಿನಲ್ಲಿ ಭಾನುವಾರ ವಾಯುಪಡೆ ನೆಲೆ ಮೇಲೆ ನಡೆದ ದಾಳಿಗೆ 2 ಡ್ರೋಣ್ ಗಳನ್ನು ಬಳಕೆ ಮಾಡಲಾಗಿದೆ ಎಂದು ಎಎನ್ಐ ವರದಿ ಪ್ರಕಟಿಸಿದೆ. ಸ್ಫೋಟದಲ್ಲಿ ವಾಯುಪಡೆಯ ಯುದ್ಧವಿಮಾನಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಇಬ್ಬರು ಸಿಬ್ಬಂದಿಗಳಿಗೆ ಗಾಯಗಳಾಗಿವೆ.
ಇದೇ ವೇಳೆ ಭಾರತೀಯ ವಾಯುಪಡೆ ಭಾನುವಾರದ ಸ್ಫೋಟವನ್ನು ದೃಢಪಡಿಸಿದ್ದು, "ಕಡಿಮೆ ತೀವ್ರತೆಯ ಸ್ಫೋಟ ಜಮ್ಮು ವಾಯುಪಡೆ ನೆಲೆಯ ತಾಂತ್ರಿಕ ಪ್ರದೇಶದಲ್ಲಿ ಸಂಭವಿಸಿದೆ" ಎಂದು ಹೇಳಿದೆ.
ಎರಡು ಸ್ಫೋಟದ ಪೈಕಿ ಒಂದು ಸ್ಫೋಟದಿಂದ ಛಾವಣಿಗೆ ಹಾನಿಯುಂಟಾಗಿದ್ದು, ಮತ್ತೊಂದು ಬಾಹ್ಯ ಪ್ರದೇಶದಲ್ಲಿ ಸಂಭವಿಸಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಐಎಎಫ್ ಉಪ ಮುಖ್ಯಸ್ಥ ಎಚ್ .ಎಸ್. ಅರೋರಾ ಅವರಿಂದ ಮಾಹಿತಿ ಪಡೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಜಮ್ಮುವಿನ ವಾಯುನೆಲೆಯಲ್ಲಿ ದಾಳಿ ನಡೆದಿರುವ ಬಗ್ಗೆ ಐಎಎಫ್ ಉಪ ಮುಖ್ಯಸ್ಥ ಎಚ್ .ಎಸ್. ಅರೋರಾ ಅವರಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಹಿತಿ ಪಡೆದಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಎನ್ಐಎಯ ಎರಡು ತಂಡಗಳು ಘಟನಾ ಸ್ಥಳಕ್ಕೆ ತೆರಳಿವೆ.