ದೇಶ

ಜಮ್ಮು ವಾಯುನೆಲೆಯಲ್ಲಿ ಅವಳಿ ಸ್ಫೋಟ: ವೈಸ್ ಏರ್ ಚೀಫ್ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತುಕತೆ 

Sumana Upadhyaya

ನವದೆಹಲಿ: ಭಾನುವಾರ ಬೆಳಗಿನ ಜಾವ ಜಮ್ಮು-ಕಾಶ್ಮೀರದ ಭಾರತೀಯ ವಾಯು ನೆಲೆಯಲ್ಲಿ ಸಂಭವಿಸಿರುವ ಎರಡು ಕಡಿಮೆ ತೀವ್ರತೆಯ ಸ್ಫೋಟ ಭಯೋತ್ಪಾದಕ ದಾಳಿಯೇ ಎಂಬ ಆಯಾಮದಲ್ಲಿ ರಕ್ಷಣಾ ಮತ್ತು ಭದ್ರತಾ ಕೇಂದ್ರದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ವಾಯುಪಡೆಯ ಉಪ ಏರ್ ಚೀಫ್, ಏರ್ ಮಾರ್ಷಲ್ ಹೆಚ್ ಎಸ್ ಅರೋರ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

ಭಾರತೀಯ ವಾಯುಪಡೆಯ ಹಲವು ವಸ್ತುಗಳನ್ನು ಹೊಂದಿರುವ ವಿಮಾನ ನಿಲ್ದಾಣದಲ್ಲಿ ಸ್ಫೋಟಕವನ್ನಿಡಲು ಡ್ರೋನ್ ಗಳ ಸಹಾಯವನ್ನು ಪಡೆದಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ಪರೀಕ್ಷೆ ಮಾಡುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ. ಜಮ್ಮು ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಎರಡು ಕಡಿಮೆ-ತೀವ್ರತೆಯ ಸ್ಫೋಟಗಳು ವರದಿಯಾಗಿದೆ ಮತ್ತು ಅವುಗಳಲ್ಲಿ ಒಂದು ಕಟ್ಟಡದ ಮೇಲ್ಛಾವಣಿಗೆ ಸಣ್ಣ ಹಾನಿಯಾಗಿದೆ ಮತ್ತು ಮತ್ತೊಂದು ತೆರೆದ ಪ್ರದೇಶದಲ್ಲಿ ಸ್ಫೋಟಗೊಂಡಿದೆ. ಯಾವುದೇ ಸಲಕರಣೆಗಳಿಗೆ ಹಾನಿಯಾಗಿಲ್ಲ. ನಾಗರಿಕ ಸಂಸ್ಥೆಗಳ ಜೊತೆಗೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದೆ.

ಭಯೋತ್ಪಾದಕ ಸಂಘಟನೆಗಳು ಇದರಲ್ಲಿ ಭಾಗಿಯಾಗಿರಬಹುದೇ ಎಂಬ ಕುರಿತು ಕೂಡ ತನಿಖೆ ಮಾಡಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಸ್ಥಳಕ್ಕೆ ಧಾವಿಸಲಿದ್ದಾರೆ ಎಂದು ಹೇಳಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದಿನಿಂದ ಮೂರು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸದಲ್ಲಿದ್ದು ಜಮ್ಮು-ಲಡಾಕ್ ಗೂ ಮಾರ್ಗ ಮಧ್ಯೆ ಭೇಟಿ ನೀಡಲಿದ್ದಾರೆ.

SCROLL FOR NEXT