ದೇಶ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟ: ಕೋವಿಡ್ ಹಿನ್ನೆಲೆ ಸುದ್ದಿ ವಾಹಿನಿಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧಾರ 

Sumana Upadhyaya

ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗುತ್ತಿದ್ದು, ಸುದ್ದಿವಾಹಿನಿಗಳಲ್ಲಿ ಚರ್ಚೆಗಳಲ್ಲಿ ಪಾಲ್ಗೊಳ್ಳುವುದರಿಂದ ದೂರವುಳಿಯಲು ಕಾಂಗ್ರೆಸ್ ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ, ದೇಶದಲ್ಲಿ ಕೊರೋನಾ ಸೋಂಕಿನ ಹೆಚ್ಚಳದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಈ ಸಂದರ್ಭದಲ್ಲಿ ಫಲಿತಾಂಶ ಪ್ರಕಟವಾದ ಮೇಲೆ ಸುದ್ದಿವಾಹಿನಿಗಳಲ್ಲಿ ಕಾಂಗ್ರೆಸ್ ನ ಯಾವ ನಾಯಕರೂ ಚರ್ಚೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳು ನಾಡು, ಪುದುಚೆರಿ ಮತ್ತು ಕೇರಳ ರಾಜ್ಯಗಳ ಚುನಾವಣಾ ಫಲಿತಾಂಶ ಇನ್ನೇನು ಕೆಲವೇ ಹೊತ್ತಿನಲ್ಲಿ ಹೊರಬೀಳಲಿದ್ದು ಮಧ್ಯಾಹ್ನದ ಹೊತ್ತಿಗೆ ಯಾವ ಪಕ್ಷಗಳು ಅಧಿಕಾರ ವಹಿಸಿಕೊಳ್ಳುತ್ತವೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.
ದೇಶ ತೀವ್ರ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಆಡಳಿತದಲ್ಲಿ ಕುಸಿದಿರುವಾಗ ಚುನಾವಣೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಮಾಡುವುದು ಸರಿಯಲ್ಲ ಎಂಬುದು ನಮ್ಮ ಭಾವನೆ. ಚುನಾವಣಾ ಚರ್ಚೆಗಳಿಂದ ನಮ್ಮ ಪಕ್ಷದ ವಕ್ತಾರರನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳು ಕೇಳುವ ಮಾಹಿತಿಗಳಿಗೆ ಉತ್ತರಿಸಲು ನಾವು ಸಿದ್ದವಿದ್ದೇವೆ. ನಾವು ಗೆಲ್ಲಲಿ, ಬಿಡಲಿ, ದೇಶದ ಜನರು ಆಕ್ಸಿಜನ್, ಬೆಡ್, ಔಷಧಿ, ವೆಂಟಿಲೇಟರ್ ಗಳಿಗೆ ಹಾಹಾಕಾರ ಪಡುತ್ತಿರುವಾಗ ಇಲ್ಲಿ ನಾವು ಚುನಾವಣೆ ಫಲಿತಾಂಶ ಚರ್ಚಿಸುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ, ದೇಶದ ನಾಗರಿಕರ ಪರವಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.

SCROLL FOR NEXT