ಗುವಾಹಟಿ: ಶಾಂತಿ ಮಾತುಕತೆಗೆ ಬರುವಂತೆ ಅಸ್ಸಾಂನ ನೂತನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ದಂಗೆಕೋರ ಗುಂಪಿನ ಸ್ವಯಂ ಘೋಷಿತ "ಕಮಾಂಡರ್-ಇನ್-ಚೀಫ್" ಪರೇಶ್ ಬರುವಾ ಅವರಿಗೆ ಮನವಿ ಮಾಡಿದರು.
ಸೋಮವಾರ ಅಸ್ಸಾಂ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶರ್ಮಾ, "ಉಲ್ಫಾ ಜೊತೆಗಿನ ಸಂಭಾಷಣೆ ದ್ವಿಮುಖ ಸಂಚಾರವಾಗಿದೆ. ಪರೇಶ್ ಬರುವಾ ಅವರು ಮುಂದೆ ಬರಬೇಕಾಗಿದೆ. ಅದೇ ರೀತಿ ನಾವು ಅವರ ಬಳಿಗೆ ಹೋಗಬೇಕಾಗಿದೆ. ಎರಡೂ ಕಡೆಯ ಇಚ್ಛಾಶಕ್ತಿ ಇದ್ದರೆ ಮಾತುಕತೆ ಕಷ್ಟವಾಗುವುದಿಲ್ಲ" ಎಂದು ಹೇಳಿದರು.
ವಿವಿಧ ದಂಗೆಕೋರ ಗುಂಪುಗಳೊಂದಿಗೆ ಕೇಂದ್ರವು ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ ಮತ್ತು ಕಾರ್ಬಿ ಆಂಗ್ಲಾಂಗ್ಗೆ ಶಾಂತಿ ಮರಳಿತು ಎಂದು ಅವರು ಹೇಳಿದರು.
"ಕಳೆದ ಐದು ವರ್ಷಗಳಲ್ಲಿ(ಬಿಜೆಪಿ ಸರ್ಕಾರದ ಅಡಿಯಲ್ಲಿ) ಜನರು ಅಸ್ಸಾಂನಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಪ್ರಕ್ರಿಯೆಯನ್ನು ಕಂಡರು. ಬೋಡೋ ಪ್ರದೇಶಗಳಿಗೆ ಮತ್ತು ಕಾರ್ಬಿ ಆಂಗ್ಲಾಂಗ್ಗೆ ಶಾಂತಿ ಮರಳಿತು. ಈಗ ಉಳಿದ ಬಂಡಾಯ ಗುಂಪುಗಳನ್ನು ಮಾತುಕತೆ ಕರೆದು ರಾಜ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಮಾಡುವುದು ನಮ್ಮ ಉದ್ದೇಶ ಎಂದು ಸಿಎಂ ಹೇಳಿದರು.
ರಾಜ್ಯದ ಕೋವಿಡ್ ಪರಿಸ್ಥಿತಿ ಆತಂಕಕಾರಿಯಾಗಿದ್ದು, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಶರ್ಮಾ ಹೇಳಿದರು.