ನವದೆಹಲಿ: ಉತ್ಪಾದನೆ ಹೆಚ್ಚಿಸಲು ದೇಶದ ಇತರ ಕಂಪನಿಗಳೊಂದಿಗೆ ಎರಡು ಕೋವಿಡ್ ಲಸಿಕೆ ತಯಾರಕರ ಲಸಿಕೆ ಸೂತ್ರವನ್ನು ಕೇಂದ್ರ ಸರ್ಕಾರ ಹಂಚಿಕೊಳ್ಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಸಲಹೆ ನೀಡಿದ್ದಾರೆ.
ದೇಶಾದ್ಯಂತ ಲಸಿಕೆ ಕೊರತೆ ಇದೆ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲರಿಗೂ ಲಸಿಕೆ ನೀಡುವ ರಾಷ್ಟ್ರೀಯ ನೀತಿಯನ್ನು ಅಭಿವೃದ್ಧಿಪಡಿಸಲು ಸಮರೋಪಾದಿಯಲ್ಲಿ ಲಸಿಕೆಯ ಉತ್ಪಾದನೆ ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೇಶದ ಎಲ್ಲಾ ಲಸಿಕೆ ಉತ್ಪಾದನಾ ಘಟಕಗಳು ಕೋವಿಡ್ ಲಸಿಕೆ ಉತ್ಪಾದಿಸಲು ಪ್ರಾರಂಭಿಸುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು.
ಎರಡು (ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್) ಕೋವಿಡ್ ಲಸಿಕೆ ತಯಾರಕರಿಗೆ ಅವರ ಸೂತ್ರವನ್ನು ಇತರ ಕಂಪನಿಗಳು ಬಳಸುವುದಕ್ಕಾಗಿ ರಾಯಧನವನ್ನು ನೀಡಬಹುದು ಎಂದು ದೆಹಲಿ ಸಿಎಂ ಸಲಹೆ ನೀಡಿದ್ದಾರೆ.
ಕೊರೋನಾ ವೈರಸ್ ಮುರನೇ ಅಲೆ ಪ್ರಾರಂಭವಾಗುವ ಮುನ್ನವೇ ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.