ದೇಶ

ಟೌಕ್ಟೇ ಚಂಡಮಾರುತ: 6 ರಾಜ್ಯಗಳಿಗೆ 100 ಎನ್ ಡಿಆರ್ ಎಫ್ ತಂಡಗಳ ನಿಯೋಜನೆ, ಸಮರೋಪಾದಿ ಕಾರ್ಯಾಚರಣೆಗೆ ಸೂಚನೆ

Srinivasamurthy VN

ನವದೆಹಲಿ: ಟೌಕ್ಟೇ ಚಂಡಮಾರುತದ ಸುಳಿಗೆ ಸಿಲುಕಿರುವ ಭಾರತದ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ 100 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಿದೆ.

ಹೌದು.. ಈ ಹಿಂದೆ ಚಂಡಮಾರುತದ ನಿರ್ವಹಣೆಗೆ ರವಾನಿಸಲಾಗಿರುವ ಎನ್ ಡಿಆರ್ಎಫ್ ತಂಡಗಳ ಪ್ರಮಾಣವನ್ನು ಇಮ್ಮಡಿಗೊಳಿಸಲಾಗಿದ್ದು, ಒಟ್ಟು 100 ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ರವಾನಿಸಲಾಗಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಎನ್ ಡಿಆರ್ ಎಫ್ ಡೈರೆಕ್ಟರ್ ಜನರಲ್ ಎಸ್ ಎನ್ ಪ್ರಧಾನ್ ಅವರು, ಚಂಡಮಾರುತ ಪೀಡಿತ ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿನ ಎನ್ ಡಿಆರ್ ಎಫ್ ತಂಡಗಳನ್ನು ದ್ವಿಗುಣಗೊಳಿಸಲಾಗಿದೆ. ಈ ಹಿಂದೆ 53 ತಂಡಗಳನ್ನು  ನಿಯೋಜಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ 47 ತಂಡಗಳನ್ನು ನಿಯೋಜಿಸಲಾಗಿದೆ. ಆ ಮೂಲಕ ಒಟ್ಟು 100 ತಂಡಗಳು ವಿವಿಧ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಿವೆ ಎಂದು ಹೇಳಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ವೇಗ ಪಡೆದುಕೊಳ್ಳಲ್ಲಿದ್ದು, ಪರಿಣಾಮ ಈ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಇಲಾಖೆ ಮುನ್ಸೂಚನೆಯನ್ನು ಆಧರಿಸಿ ರಕ್ಷಣಾ ತಂಡಗಳ ಪ್ರಮಾಣವನ್ನು ದ್ವಿಗುಣಗೊಳಿಸಲಾಗಿದೆ. ಒಟ್ಟು 100 ತಂಡಗಳು ಕಾರ್ಯಾಚರಣೆಯಲ್ಲಿ  ಪಾಲ್ಗೊಳ್ಳಲ್ಲಿದ್ದು, ಈ 100 ತಂಡಗಳಲ್ಲಿ 42 ತಂಡಗಳನ್ನು ಈ ಆರು ರಾಜ್ಯಗಳಲ್ಲಿ ನಿಯೋಜಿಸಲಾಗಿದ್ದು, 26 ತಂಡಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. 32 ತಂಡಗಳು ಏರ್ ಲಿಫ್ಟ್ ಕಾರ್ಯಾಚರಣೆ ಮತ್ತು ಇತರೆ ಅಗತ್ಯ ವಸ್ತುಗಳ ಪೂರೈಕೆಗಾಗಿ ನಿಯೋಜನೆಗೊಂಡಿವೆ ಎಂದು ಹೇಳಿದರು.

ಇದೇ ವೇಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಸಿಬ್ಬಂದಿಗಳೂ ತಮ್ಮ ಪಾಲಿನ ಎರಡೂ ಡೋಸ್ ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಂಡವರಾಗಿದ್ದು, ಕಾರ್ಯಾಚರಣೆಗೆ ಬೇಕಾದ ಎಲ್ಲ ರೀತಿಯ ಸಿದ್ದತೆಗಳು ಮತ್ತು ಪರಿಕರಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಾರೆ. ಅಂತೆಯೇ 35ರಿಂದ 40  ಸಿಬ್ಬಂದಿಗಳಿರುವ ಒಂದು ತಂಡ ಮರ ಕತ್ತರಿಸುವುದು, ವಿದ್ಯುತ್ ಕಂಬಗಳ ತೆರವು, ದೋಣಿಗಳು, ಮೂಲ ವೈದ್ಯಕೀಯ ನೆರವು ಮತ್ತು ಇತರ ಪರಿಹಾರ ಮತ್ತು ರಕ್ಷಣಾ ಸಾಧನಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಾರೆ ಎಂದು ಪ್ರಧಾನ್ ಮಾಹಿತಿ ನೀಡಿದರು.

ಇನ್ನು ಕೇಂದ್ರ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳಲ್ಲಿ ಟೌಕ್ಟೇ ಚಂಡಮಾರತ ಮತ್ತಷ್ಟು ವೇಗವಾಗಿ ಅಪ್ಪಳಿಸಲಿದ್ದು, ಗುಜರಾತ್ ಕರಾವಳಿಯನ್ನು ದಾಟಲಿದೆ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್, ಗೋವಾ  ಮತ್ತು ಮಹಾರಾಷ್ಟ್ರಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಹೇಳಿದೆ. 
 

SCROLL FOR NEXT