ದೇಶ

ವೈಜಾಗ್‌ನ ಎಚ್‌ಪಿಸಿಎಲ್ ಘಟಕದಲ್ಲಿ ಭಾರೀ ಅಗ್ನಿ ಅವಘಡ, ಎಲ್ಲಾ ಉದ್ಯೋಗಿಗಳ ಸ್ಥಳಾಂತರ

Lingaraj Badiger

ವಿಶಾಖಪಟ್ಟಣಂ: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಎಚ್‌ಪಿಸಿಎಲ್) ನ ವಿಶಾಖ ಸಂಸ್ಕರಣಾಗಾರದಲ್ಲಿ ಮಂಗಳವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ತಕ್ಷಣ ಎಲ್ಲಾ ಉದ್ಯೋಗಿಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಬೆಂಕಿ ಕಾಣಿಸಿಕೊಳ್ಳುವ ಮೊದಲು ಒಂದೆರಡು ಸ್ಫೋಟಗಳು ಸಂಭವಿಸಿವೆ. ಎಚ್ ಪಿಸಿಎಲ್ ಘಟಕದಿಂದ ದೊಡ್ಡ ಪ್ರಮಾಣದ ಹೊಗೆ ಬರುತ್ತಿದೆ ಎಂದಿದ್ದಾರೆ.

ಮಧ್ಯಾಹ್ನ 3.15 ರ ಸುಮಾರಿಗೆ ಸಂಸ್ಕರಣಾಗಾರದ ಹಳೆಯ ಟರ್ಮಿನಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು.  ಘಟನೆ ನಡೆದಾಗ ಸುಮಾರು 100 ಸಿಬ್ಬಂದಿ ಕರ್ತವ್ಯದಲ್ಲಿದ್ದರು ಎನ್ನಲಾಗಿದೆ.

ಕಂಪನಿಯ ಸೈರನ್ಗಳು ತಕ್ಷಣವೇ ಎಚ್ಚರಿಕೆ ನೀಡಿದ್ದರಿಂದ ಅಲ್ಲಿಂದ ಸಿಬ್ಬಂದಿಯನ್ನು ತಕ್ಷಣ ಸ್ಥಳಾಂತರಿಸಲಾಗಿದೆ. ಹೀಗಾಗಿ ಕಾರ್ಮಿಕರಿಗೆ ಯಾವುದೇ ಸಾವುನೋವು ಅಥವಾ ಗಾಯಗಳಾಗಿಲ್ಲ. ಆದರೆ, ಭಾರಿ ಬೆಂಕಿ ಮತ್ತು ಹೊಗೆ ಶ್ರೀಹರಿಪುರಂ ಮತ್ತು ಮಲ್ಕಾಪುರಂ ಪ್ರದೇಶಗಳ ಜನರಲ್ಲಿ ಭೀತಿ ಹುಟ್ಟಿಸಿದೆ.

ಎಚ್‌ಪಿಸಿಎಲ್ ಅಧಿಕಾರಿಗಳು ಬೆಂಕಿ ನಿಯಂತ್ರಿಸಲು ಇತ್ತೀಚಿನ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆಂದು ವರದಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಘಟಕದ ಆವರಣದಿಂದ ನೌಕರರನ್ನು ಸ್ಥಳಾಂತರಿಸಲಾಗಿದೆ.

ಸಂಸ್ಕರಣಾಗಾರದಲ್ಲಿನ ತ್ಯಾಜ್ಯ ಅನಿಲ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದರೂ, ಕೊನೆಯದಾಗಿ ವರದಿಗಳು ಬಂದಾಗ ಘಟಕದಿಂದ ಹೊಗೆ ಹೊರಹೊಮ್ಮುತ್ತಿತ್ತು. ಈ ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

SCROLL FOR NEXT