ದೇಶ

ಲಕ್ಷದ್ವೀಪದಲ್ಲಿ ಬಿಜೆಪಿಗೆ ಹಿನ್ನಡೆ: ಪಕ್ಷ ತೊರೆದ 8 ಮಂದಿ ನಾಯಕರು!

Srinivas Rao BV

ತಿರುವನಂತಪುರಂ: ಲಕ್ಷದ್ವೀಪ ಬಿಜೆಪಿಗೆ ಹಿನ್ನಡೆಯುಂಟಾಗಿದ್ದು ಕನಿಷ್ಟ 8 ಮಂದಿ ಪದಾಧಿಕಾರಿಗಳು ಪಕ್ಷವನ್ನು ತೊರೆದಿದ್ದಾರೆ. 

ಹೊಸ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ನಿರಂಕುಶವಾದಿ ನಡೆಯನ್ನು ವಿರೋಧಿಸಿ ಬಿಜೆಪಿಯ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಫುಲ್ ಖೋಡಾ ಪಟೇಲ್ ಅವರ ನಡೆಯಿಂದ ಸ್ಥಳೀಯ ಸಂಸ್ಕೃತಿ ಹಾಗೂ ಶಾಂತಿ ಹಾಳಾಗಲಿದೆ ಎಂದು ಸ್ಥಳೀಯ ನಾಯಕರು ಆರೋಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜನವಿರೋಧಿ ಆಡಳಿತದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಇರುವುದರ ಬಗ್ಗೆ ಗಮನ ಸೆಳೆಯುವುದಕ್ಕಾಗಿ ರಾಜೀನಾಮೆ ನೀಡಿರುವುದಾಗಿ ಸ್ಥಳೀಯ ಬಿಜೆಪಿ ನಾಯಕರು ಹೇಳಿದ್ದಾರೆ.

ಲಕ್ಷದ್ವೀಪದಲ್ಲಿ ಬಿಜೆಪಿ ನಾಯಕರು ರಾಜೀನಾಮೆ ನೀಡುತ್ತಿರುವುದು ಕೇರಳದ ಬಿಜೆಪಿ ನಾಯಕರಿಗೂ ಸಂಘಟನಾತ್ಮಕ ದೃಷ್ಟಿಯಿಂದ ಉಂಟಾಗಿರುವ ಬಹುದೊಡ್ಡ ಹಿನ್ನಡೆಯಾಗಿದೆ.  ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಾ ಕುಟ್ಟಿ ಲಕ್ಷದ್ವೀಪದ ಉಸ್ತುವಾರಿಯಾಗಿದ್ದು, ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಗೂ ಇದು ಹಿನ್ನೆಡೆಯಾಗಿದೆ.

ಇಬ್ಬರೂ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಕ್ಷದ್ವೀಪದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಮುಸ್ಲಿಂ ಸಂಘಟನೆಗಳು ಹಾಗೂ ಕೇರಳದಲ್ಲಿನ ಎಡಪಕ್ಷಗಳು ಸೃಷ್ಟಿಸಿವೆ ಎಂದು ಹೇಳಿದ್ದಾರೆ. "ಪಟೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕನಸುಗಳನ್ನು ಲಕ್ಷದ್ವೀಪದಲ್ಲಿ ಜಾರಿಗೊಳಿಸಲು ಯತ್ನಿಸುತ್ತಿದ್ದಾರೆ" ಎಂದು ಅಬ್ದುಲ್ಲಾ ಕುಟ್ಟಿ ಹೇಳಿದ್ದಾರೆ.

ಮಾಜಿ ರಾಜ್ಯ ಉಪಾಧ್ಯಕ್ಷ ಎಂಸಿ ಮುತ್ತುಕೋಯ, ಖಜಾಂಚಿ ಬಿ.ಶುಕ್ಕೋರ್, ಬಿಜೆವೈಎಂ ನ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಸೀಮ್ ರಾಜೀನಾಮೆ ನೀಡಿರುವ ನಾಯಕರ ಪೈಕಿ ಪ್ರಮುಖರಾಗಿದ್ದಾರೆ.

SCROLL FOR NEXT