ನವದೆಹಲಿ: ಕೋವಿಡ್ ಗೆ ಬಲಿಯಾಗುತ್ತಿರುವವರ ಕುರಿತು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ.
ಕೋವಿಡ್-19 ಸಂಬಂಧ ಟ್ವೀಟ್ ಮಾಡುವ ಬದಲು ರಾಹುಲ್ ಗಾಂಧಿ ಕಾಂಗ್ರೆಸ್ ನ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಿ ಎಂದು ಬಿಜೆಪಿ ತಿರುಗೇಟು ನೀಡಿದೆ.
ಸರ್ಕಾರ ಕೋವಿಡ್-19 ಸಾವಿನ ಸಂಖ್ಯೆಯ ಕುರಿತು ಸುಳ್ಳು ಮಾಹಿತಿ ನೀಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ರಾಹುಲ್ ಗಾಂಧಿಗೆ ಏನೂ ಗೊತ್ತಿಲ್ಲ, ಆದರೂ ಎಲ್ಲದರ ಬಗ್ಗೆಯೂ ಮಾತನಾಡುತ್ತಾರೆ ಎಂದಿರುವ ಬಿಜೆಪಿ, ರಾಹುಲ್ ಗಾಂಧಿ ಅವರನ್ನು ಟೀಕಿಸಲು ಅತಿ ಹೆಚ್ಚು ಸಾವಿನ ಪ್ರಮಾಣ ಇರುವ ರಾಜ್ಯಗಳಾದ ಮಹಾರಾಷ್ಟ್ರಗಳಂತಹ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಬಗ್ಗೆ ಉಲ್ಲೇಖಿಸಿದೆ.
ಸಂಬಿತ್ ಪಾತ್ರ ಈ ಬಗ್ಗೆ ಟ್ವೀಟ್ ಮಾಡಿದ್ದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷದ ಭಾಗವಾಗಿದೆ, ಈ ರಾಜ್ಯದಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣಗಳಿದೆ. ಇನ್ನು ಕಾಂಗ್ರೆಸ್ ಆಡಳಿತದಲ್ಲಿರುವ ಮತ್ತೊಂದು ರಾಜ್ಯ ರಾಜಸ್ಥಾನದಲ್ಲಿ ವಾಸ್ತವದಲ್ಲಿರುವ ಸಾವಿನ ಸಂಖ್ಯೆಗಳಿಗೂ ಸರ್ಕಾರ ತೋರಿಸುತ್ತಿರುವ ಸಾವಿನ ಸಂಖ್ಯೆಗಳಿಗೂ ವ್ಯತ್ಯಾಸವಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಟೀಕಿಸುವುದಕ್ಕೆ ಟ್ವಿಟರ್ ನಲ್ಲಿ ಬರೆಯುವುದರ ಬದಲು ರಾಹುಲ್ ಗಾಂಧಿ ಅವರ ಪಕ್ಷದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಿ ಎಂದು ಸಂಬಿತ್ ಪಾತ್ರ ಸಲಹೆ ನೀಡಿದ್ದು, ತಪ್ಪು ಮಾಹಿತಿ ಹಾಗೂ ಸುಳ್ಳುಗಳನ್ನು ಹರಡುವುದು ಕಾಂಗ್ರೆಸ್ ನಾಯಕರ ಆದ್ಯತೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.