ದೇಶ

ಗಲ್ವಾನ್ ಕಣಿವೆಯ‌ ಹೀರೋ ಕರ್ನಲ್ ಸಂತೋಷ್‌ ಬಾಬುಗೆ ಮರಣೋತ್ತರ 'ಮಹಾವೀರ ಚಕ್ರ' ಪದಕ ಪ್ರದಾನ

Nagaraja AB

ನವದೆಹಲಿ: ಕಳೆದ ವರ್ಷ ಜೂನ್ ನಲ್ಲಿ  ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಯೋಧರ ಸಂಘರ್ಷದಲ್ಲಿ ಹುತಾತ್ಮರಾದ 16ನೇ ಬಿಹಾರ ಬೆಟಾಲಿಯನ್‌ನ ಕಮಾಂಡಿಂಗ್‌ ಆಫೀಸರ್‌ ಆಗಿದ್ದ ಸಂತೋಷ್‌ ಬಾಬು 
ಅವರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಎರಡನೇ ಅತೀ ದೊಡ್ಡ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ನೀಡಿ ಗೌರವಿಸಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿಯನ್ನು ಬಾಬು ಪತ್ನಿ ಬಿ ಸಂತೋಷಿ ಮತ್ತು ತಾಯಿ ಮಂಜುಳಾ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಹಾವೀರ ಚಕ್ರ ಪರಮ್ ವೀರ ಚಕ್ರ ನಂತರ ಎರಡನೇ ಅತೀ ದೊಡ್ಡ ಶೌರ್ಯ ಪ್ರಶಸ್ತಿಯಾಗಿದೆ. ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಇತರ ನಾಲ್ವರು ಯೋಧರಾದ ನಾಯಿಬ್ ಸುಬೇದಾರ್ ನುದುರಾಮ್ ಸೊರೆನ್, ಹವಿಲ್ದಾರ್ (ಗನ್ನರ್) ಕೆ ಪಳನಿ, ನಾಯಕ್ ದೀಪಕ್ ಸಿಂಗ್ ಮತ್ತು ಸಿಪಾಯಿ ಗುರ್ತೇಜ್ ಸಿಂಗ್ ಅವರಿಗೆ ಮರಣೋತ್ತರವಾಗಿ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನೆಯ ಭಾಗವಾಗಿದ್ದ ಮತ್ತು ಯುದ್ಧದಲ್ಲಿ ಬದುಕುಳಿದ 3 ಮಧ್ಯಮ ರೆಜಿಮೆಂಟ್‌ನ ಹವಾಲ್ದಾರ್ ತೇಜಿಂದರ್ ಸಿಂಗ್ ಅವರಿಗೂ ವೀರ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ. ವೀರ ಚಕ್ರ ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾಗಿದೆ.

ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇದು ದಶಕಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು.

SCROLL FOR NEXT