ದೇಶ

ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭ: ಕಲಾಪ ರಚನಾತ್ಮಕವಾಗಿ ಫಲಪ್ರದವಾಗಿ ಸಾಗಲು ವಿಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ

Sumana Upadhyaya

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು ಸೋಮವಾರ ನವೆಂಬರ್ 29ರಂದು ಆರಂಭವಾಗುತ್ತಿದೆ. ಅಧಿವೇಶನ ಕಲಾಪದಲ್ಲಿ ಭಾಗವಹಿಸುವ ಮುನ್ನ ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಇಂದು ಸಂಸತ್ತಿನ ಬಹಳ ಮುಖ್ಯವಾದ ಅಧಿವೇಶನ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ದೇಶದ ನಾಲ್ಕು ಭಾಗಗಳಲ್ಲಿನ ಜನರ, ರಾಷ್ಟ್ರದ ಹಿತಕ್ಕಾಗಿ ರಚನಾತ್ಮಕವಾದ ಮಾತುಕತೆ, ಚರ್ಚೆ ಅಧಿವೇಶನದಲ್ಲಿ ನಡೆಯುವುದು ಮುಖ್ಯವಾಗುತ್ತದೆ. ದೇಶದ ಸಾಮಾನ್ಯ ಜನರಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅವರ ಕನಸನ್ನು ನನಸು ಮಾಡಲು ಸಂಸತ್ತು ಸದಸ್ಯರು ಕೈಜೋಡಿಸಬೇಕು, ದೇಶದ ನಾಗರಿಕರು ಸಂಸತ್ಸದಸ್ಯರು ಫಲಪ್ರದವಾಗಿ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದನ್ನು ಬಯಸುತ್ತಾರೆ ಅದಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು. 

ಸಂಸತ್ತಿನಲ್ಲಿ ಸುಗಮ ಕಲಾಪಕ್ಕೆ ಪ್ರತಿಪಕ್ಷಗಳ ನಾಯಕರು ಸಹಕರಿಸುವಂತೆ ಮನವಿ ಮಾಡಿಕೊಂಡರು. ನಾವು ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿದ್ದೇವೆ ಎಂದು ಕೂಡ ಹೇಳಿದರು. ಅಧಿವೇಶನದಲ್ಲಿ ಸರ್ಕಾರ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಮತ್ತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದವಿದೆ. ಸದನದ ಗೌರವ, ಘನತೆಯನ್ನು ಕಾಪಾಡುವಂತೆ ವಿಪಕ್ಷಗಳನ್ನು ಕೇಳಿಕೊಂಡರು. 

ಚಳಿಗಾಲದ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಹೇಳಿದ ಮಾತಿನ ಸಾರಾಂಶಗಳು: 

  • ಸರ್ಕಾರದ ನೀತಿಗಳ ವಿರುದ್ಧದ ಧ್ವನಿಗಳು ಬಲವಾಗಿರಬೇಕು ಆದರೆ ಘನತೆಯನ್ನು ಎತ್ತಿಹಿಡಿಯಬೇಕು
  • ಕಲಾಪ ಹೇಗೆ ಸಾಗಿದೆ ಎಂಬುದು ಮುಖ್ಯವಾಗಬೇಕೆ ಹೊರತು ಅಡ್ಡಿಪಡಿಸಿದ್ದು ಅಲ್ಲ, ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ, ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧ
  • ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ಸಂಸತ್ತು ಚರ್ಚೆ ನಡೆಸಬೇಕೆಂದು ನಾಗರಿಕರು ಬಯಸುತ್ತಾರೆ, ಅಭಿವೃದ್ಧಿಗೆ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ

ಇದೀಗ ಸಂಸತ್ತಿನ ಉಭಯ ಸದನಗಳಲ್ಲಿ ಚಳಿಗಾಲದ ಅಧಿವೇಶನ ಕಲಾಪ ಪ್ರಾರಂಭವಾಗಿದೆ. ಇದಕ್ಕೂ ಮುನ್ನ ಪ್ರಧಾನ ಮಂತ್ರಿಗಳು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಸಂಪುಟದ ಹಿರಿಯ ಸದಸ್ಯರೊಂದಿಗೆ ಸಭೆ ನಡೆಸಿದರು.

ಚಳಿಗಾಲದ ಅಧಿವೇಶನ ಡಿಸೆಂಬರ್ 23 ರಂದು ಮುಕ್ತಾಯಗೊಳ್ಳಲಿದೆ.

SCROLL FOR NEXT