ದೇಶ

ಉತ್ತರ ಪ್ರದೇಶ: ಕೋರ್ಟ್​ನಲ್ಲೇ ದುಷ್ಕರ್ಮಿಗಳಿಂದ ವಕೀಲನ ಗುಂಡಿಕ್ಕಿ ಹತ್ಯೆ

Lingaraj Badiger

ಶಹಜಾನ್​ಪುರ​: ಭೂಪೇಂದ್ರ ಪ್ರತಾಪ್ ಸಿಂಗ್ ಎಂಬ ವಕೀಲರನ್ನು ನ್ಯಾಯಾಲಯದ ಮೂರನೇ ಮಹಡಿಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಾನ್​ಪುರದಲ್ಲಿ ನಡೆದಿದೆ.

ಶಹಜಾನ್​ಪುರ ಸಿವಿಲ್​ ಕೋರ್ಟ್​​ನ ಮೂರನೇ ಮಹಡಿಯಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಸದರ್ ಪೊಲೀಸರು ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜಲಾಲಾಬಾದ್ ತಹಸಿಲ್‌ನ ವಕೀಲ ಭೂಪೇಂದ್ರ ಸಿಂಗ್(38) ಅವರು ಜಿಲ್ಲಾ ನ್ಯಾಯಾಲಯದ ಎಸಿಜೆಎಂ -1ರ ಮೂರನೇ ಮಹಡಿಯ ಕಚೇರಿಯಲ್ಲಿ ಗುಮಾಸ್ತರನ್ನು ಭೇಟಿ ಮಾಡಲು ಬಂದಾಗ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಎಸ್ ಆನಂದ್ ಅವರು ಹೇಳಿದ್ದಾರೆ. 

ಹತ್ಯೆಯಾದ ಸ್ಥಳದಲ್ಲಿ ಬೇರೆ ಯಾರೂ ಇರಲಿಲ್ಲವಾದ್ದರಿಂದ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಹಿರಿಯ ಅಧಿಕಾರಿಗಳು ಮತ್ತು ತನಿಖಾ ತಂಡಗಳು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿವೆ ಎಂದು ಆನಂದ್ ಅವರು ತಿಳಿಸಿದ್ದಾರೆ.

ಕೊಲೆಯ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಹಳೇ ವೈಷಮ್ಯದಿಂದಾಗಿ ಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

SCROLL FOR NEXT