ದೇಶ

ಮುಜಾಫರ್ ನಗರ ಕೋಮು ಗಲಭೆ ಪ್ರಕರಣ: ಖತೌಲಿ ಬಿಜೆಪಿ ಶಾಸಕ ವಿಕ್ರಂ ಸೈನಿ ಖುಲಾಸೆ

Lingaraj Badiger

ಮುಜಾಫರ್‌ನಗರ: 2013 ರ ಮುಜಫರ್‌ನಗರ ಕೋಮು ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಖತೌಲಿ ಬಿಜೆಪಿ ಶಾಸಕ ವಿಕ್ರಂ ಸೈನಿ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಶುಕ್ರವಾರ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

ಗಲಭೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಗೋಪಾಲ್ ಉಪಾಧ್ಯಾಯ ಅವರು, ಶಾಸಕ ವಿಕ್ರಮ್ ಸೈನಿ ಮತ್ತು ಇತರ 11 ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.

ಪ್ರಾಸಿಕ್ಯೂಷನ್ ಆರೋಪಿಗಳ ವಿರುದ್ಧ ಗಲಭೆ ಮತ್ತು ಬೆಂಕಿ ಹಚ್ಚಿದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.

ಮುಜಾಫರ್ ನಗರ ಜಿಲ್ಲೆಯ ಜನಸತ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾವಲ್ ಗ್ರಾಮದಲ್ಲಿ ಗಲಭೆ, ಬೆಂಕಿ ಹಚ್ಚುವಿಕೆ ಮತ್ತು ಸಾರ್ವಜನಿಕ ಸೇವಕರಿಗೆ ಬೆದರಿಕೆ ಹಾಕಿದ ಆರೋಪ ಸೇರಿದಂತೆ ಶಾಸಕರು ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.

2013ರ ಆಗಸ್ಟ್ 27 ರಂದು ಕಾವಲ್ ಹಳ್ಳಿ ಚೌಕಿದಾರ್ ಇಶ್ತಿಯಾಕ್ ಅವರು ಜನಸತ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಎಫ್‌ಐಆರ್‌ನಲ್ಲಿ, ಸೈನಿ, ಅಂದಿನ ಕಾವಲ್ ಗ್ರಾಮ ಪ್ರಧಾನ್ ಮತ್ತು ಆತನ ಸಹಚರರು ಹಳ್ಳಿ ನಿವಾಸಿ ಸರ್ಫರಾಜ್ ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಬೆದರಿಕೆ ಹಾಕುವ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿದ್ದರು.

SCROLL FOR NEXT