ದೇಶ

ತ್ರಿಪುರಾ ಅಫ್ಘಾನಿಸ್ತಾನವಾಗುವುದನ್ನು ತಡೆಯಲು ಬಿಜೆಪಿ ಸೋಲಿಸಿ: ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ

Nagaraja AB

ಅಗರ್ತಲಾ: 2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಭಾನುವಾರ ಹೇಳಿದ್ದಾರೆ. ಬಿಜೆಪಿ ದುರಾಡಳಿತವನ್ನು ಅಂತ್ಯಗೊಳಿಸಿ ಈಶಾನ್ಯ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಮಾದರಿಯ ಉತ್ತಮ ಆಡಳಿತವನ್ನು ಅನುಸರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಟ್ಯಾಗೋರ್ ಶತಮಾನೋತ್ಸವ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬ್ಯಾನರ್ಜಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ಆರೋಪಿಸಿದರು.

ಬಿಜೆಪಿಯಿಂದ ಎಲ್ಲಾ ಸುಳ್ಳಿನ ಭರವಸೆಗಳನ್ನು ನೀಡಲಾಗುತ್ತಿದೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಎಂದು ಅವರು ಹೇಳುತ್ತಿದ್ದಾರೆ. ಆದರೆ,  ಪಶ್ಚಿಮ ಬಂಗಾಳದ ಪ್ರಗತಿ ವರದಿ ಕಾರ್ಡನ್ನು ತ್ರಿಪುರಾದ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ತ್ರಿಪುರಾದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದರು.

ನವೆಂಬರ್ 25 ರಂದು ನಡೆಯಲಿರುವ ಅಗರ್ತಲಾ ಮುನ್ಸಿಪಲ್ ಕೌನ್ಸಿಲ್ ಚುನಾವಣೆ ಸೇರಿದಂತೆ 2023 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಅವರು ಹೇಳಿದರು. ಬಿಜೆಪಿಯನ್ನು ಸೋಲಿಸಲೇ ಬೇಕಾಗಿದೆ. ಇಲ್ಲವಾದರೆ ತ್ರಿಪುರಾ ಅಫ್ಘಾನಿಸ್ತಾನದಂತಾಗುತ್ತದೆ ಎಂದು ಹೇಳಿದರು.

ತಾಲಿಬಾನ್ ರೀತಿಯಲ್ಲಿ  ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ಮಾಡಲು ಬಿಜೆಪಿ ಮುಖಂಡರು ಈಗಾಗಲೇ ತಮ್ಮ ಪಕ್ಷದ ಕಾರ್ಯಕರ್ತರನ್ನು ಛೂ ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

SCROLL FOR NEXT