ದೇಶ

ನಾನು ಸಿಎಂ ಆಗಿ ಮುಂದುವರೆಯಲು ನಿಮ್ಮ ಪ್ರತಿಯೊಂದು ಮತವೂ ಬೇಕು: ಭವಾನಿಪುರದಲ್ಲಿ ಮಮತಾ

Lingaraj Badiger

ಕೋಲ್ಕತ್ತಾ: ಭವಾನಿಪುರ ಉಪಚುನಾವಣೆಯ ಪ್ರಚಾರ ಆರಂಭಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರತಿಯೊಬ್ಬರೂ ತಮಗೆ ನೀಡಬೇಕು. ಇಲ್ಲದಿದ್ದರೆ ತಾವು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ.

"ನನಗೆ ಪ್ರತಿಯೊಂದು ಮತವೂ ಬಹಳ ಮುಖ್ಯ. ಈ ಚುನಾವಣೆಯಲ್ಲಿ ದೀದಿ ಖಂಡಿತವಾಗಿಯೂ ಗೆಲ್ಲುತ್ತಾರೆ ಎಂದು ಭಾವಿಸಿ ನೀವು ನಿಮ್ಮ ಮತವನ್ನು ಚಲಾಯಿಸದಿದ್ದರೆ ಅದು ದೊಡ್ಡ ತಪ್ಪು. ಭಾರೀ ಮಳೆ ಅಥವಾ ಬಿರುಗಾಳಿ ಇದ್ದರೂ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬೇಡಿ... ನಿಮ್ಮ ಮತವನ್ನು ಚಲಾಯಿಸಿ. ಇಲ್ಲದಿದ್ದರೆ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 292 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಆದರೆ ನಂದಿಗ್ರಾಮದಲ್ಲಿ ಸೋಲು ಅನುಭವಿಸಿದ ಮಮತಾ ಬ್ಯಾನರ್ಜಿ ಅವರು ಈಗ ಭವಾನಿಪುರದಲ್ಲಿ ಪ್ರತಿ ಮತವನ್ನು ತಮಗೆ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಇದೇ ವೇಳೆ ತಾವು ಗಾಯಗೊಂಡ ನಂದಿಗ್ರಾಮದ ದುರ್ಘಟನೆಯನ್ನು ಉಲ್ಲೇಖಿಸಿದ ದೀದಿ, ತಮ್ಮ ವಿರುದ್ಧ ಪಿತೂರಿ ನಡೆಸಲಾಗಿತ್ತು. "ಈ ಘಟನೆಯು ನನ್ನನ್ನು ಕೊಲ್ಲುವ ಗುರಿ ಹೊಂದಿತ್ತು. ಆದರೆ ಅದೃಷ್ಟ ನನ್ನ ಪರವಾಗಿತ್ತು. ಹೀಗಾಗಿ ಕಾಲಿಗೆ ಗಾಯವಾಗಿ ಜೀವ ಉಳಿಯಿತು. ನಾನು ಇನ್ನೂ ನೋವು ಅನುಭವಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.

"ಭವಾನಿಪುರದಲ್ಲಿನ ಅಲೆಗಳು ಮಮತಾ ಬ್ಯಾನರ್ಜಿಯವರ ನಿರೀಕ್ಷೆಯಂತೆ ಇಲ್ಲ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಅವರು ಸೋಲುವ ಆತಂಕ ಎದುರಿಸುತ್ತಿದ್ದಾರೆ ಎಂದು ತೋರುತ್ತಿದೆ. ಹೀಗಾಗಿ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಲಾಭಕ್ಕಾಗಿ "ಒಂದು ಮತಕ್ಕಾಗಿ ಮನವಿ" ಮಾಡಿದ್ದಾರೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿದ್ದಾರೆ.

SCROLL FOR NEXT