ದೇಶ

ಮಹಾರಾಷ್ಟ್ರದಲ್ಲಿ 'ದಹಿ ಹಂಡಿ'ಗೆ ಸಾಹಸ ಕ್ರೀಡೆ ಸ್ಥಾನಮಾನ; ಗಾಯಾಳುಗಳಿಗೆ ಪರಿಹಾರ

Lingaraj Badiger

ಮುಂಬೈ: ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಆಚರಿಸಲಾಗುವ ಮೇಲಿಟ್ಟ ಮೊಸರು ತುಂಬಿದ ಮಣ್ಣಿನ ಮಡಿಕೆ ಒಡೆವ 'ದಹಿ ಹಂಡಿ'ಗೆ ಸಾಹಸ ಕ್ರೀಡೆಯ ಸ್ಥಾನಮಾನ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಗುರುವಾರ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

ದಹಿ ಹಂಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯುವಕರಿಗೆ ಕ್ರೀಡಾ ಕೋಟಾದ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗುವುದು ಎಂದು ಮಹಾ ಸಿಎಂ ತಿಳಿಸಿದ್ದಾರೆ.

ಮಾನವ ಪಿರಮಿಡ್‌ಗಳ ರಚನೆಯ ಸಂದರ್ಭದಲ್ಲಿ ಆಟಗಾರರಿಗೆ ಮಾರಣಾಂತಿಕ ಅಥವಾ ಇತರ ಗಾಯಗಳಾದರೆ ಭಾಗವಹಿಸುವವರಿಗೆ ಅಥವಾ ಅವರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗುವುದು ಎಂದು ಶಿಂಧೆ ಹೇಳಿದ್ದಾರೆ.

"ಮಹಾರಾಷ್ಟ್ರ ಸರ್ಕಾರವು ದಹಿ ಹಂಡಿ ಆಚರಣೆಯ ಭಾಗವಾಗಿ ಮಾನವ ಗೋಪುರಗಳ ರಚನೆಯನ್ನು ಸಾಹಸ ಕ್ರೀಡೆಯಾಗಿ ಗುರುತಿಸಲು ನಿರ್ಧರಿಸಿದೆ. ಈ ಮಾನ್ಯತೆಯೊಂದಿಗೆ, ಆಟಗಾರರು ಕ್ರೀಡಾ ಕೋಟಾದ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ" ಎಂದು ಶಿಂಧೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಮಾನವ ಪಿರಮಿಡ್‌ಗಳ ರಚನೆಯ ಸಮಯದಲ್ಲಿ ಆಟಗಾರರು ದುರದೃಷ್ಟಕರವಾಗಿ ಸಾವನ್ನಪ್ಪಿದರೆ, ಅವರ / ಅವಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮಹಾ ಸಿಎಂ ಹೇಳಿದ್ದಾರೆ.

SCROLL FOR NEXT