ಗಾಂಧಿನಗರ: ದೆಹಲಿಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶ್ರಮಿಸಿದ ಡಿಸಿಎಂ ಮನೀಶ್ ಸಿಸೋಡಿಯಾ ಅವರಿಗೆ ಭಾರತ ರತ್ನ ನೀಡಬೇಕು. ಆದರೆ ರಾಜಕೀಯ ದುರುದ್ದೇಶದಿಂದ ಕೇಂದ್ರ ಸರ್ಕಾರ ಅವರ ವಿರುದ್ಧ ಕೇಸ್ ದಾಖಲಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಎದುರಿಸಲಿರುವ ಗುಜರಾತ್ ಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಇಂದು ಐದನೇ ಬಾರಿ ಕೇಜ್ರಿವಾಲ್ ಭೇಟಿ ನೀಡಿದ್ದು, ನ್ಯೂ ಯಾರ್ಕ್ ಟೈಮ್ಸ್ ನಮ್ಮ ಶಿಕ್ಷಣ ಮಾದರಿಯನ್ನು ಶ್ಲಾಘಿಸಿದೆ. ಆದರೆ ಕೇಂದ್ರ ಸರ್ಕಾರ ಸಿಸೋಡಿಯಾ ಅವರನ್ನು ಮೆಚ್ಚುವ ಬದಲು ಟಾರ್ಗೆಟ್ ಮಾಡುತ್ತಿದೆ ಎಂದರು.
ಇದನ್ನು ಓದಿ: 'ಎಎಪಿ ಬಿಟ್ಟು ಬಿಜೆಪಿ ಪಕ್ಷ ಸೇರಿದರೆ ಎಲ್ಲಾ ಕೇಸ್ ಕ್ಲೋಸ್': ಸಂದೇಶ ಬಂದಿದ್ದಾಗಿ ಮನೀಶ್ ಸಿಸೋಡಿಯಾ ಆರೋಪ
ಶೀಘ್ರದಲ್ಲೇ ಸಿಸೋಡಿಯಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಕೇಜ್ರಿವಾಲ್, ನನ್ನನ್ನೂ ಬಂಧಿಸಬಹುದು. ಯಾರಿಗೆ ಗೊತ್ತು. ಗುಜರಾತ್ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದೆಲ್ಲವನ್ನೂ ಮಾಡಲಾಗುತ್ತಿದೆ" ಎಂದು ದೆಹಲಿ ಸಿಎಂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಗುಜರಾತ್ನಲ್ಲಿ ತಮ್ಮ ಆಮ್ ಆದ್ಮಿ ಪಕ್ಷ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಲಿನ ಜನತೆಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ನೀಡುವುದಾಗಿ ಕೇದ್ರಿವಾಲ್ ಭರವಸೆ ನೀಡಿದರು.