ದೇಶ

ಅಕ್ರಮ ಗಣಿಗಾರಿಕೆ ಪ್ರಕರಣ: ಜಾರ್ಖಂಡ್‌ನ ಹಲವು ಕಡೆ ದಾಳಿ ನಡೆಸಿದ ಇ.ಡಿ; 2 ಎಕೆ ರೈಫಲ್‌ ವಶಕ್ಕೆ

Ramyashree GN

ರಾಂಚಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತನಿಖೆ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಜಾರ್ಖಂಡ್‌ನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, 2 ಎಕೆ ಸರಣಿಯ ರೈಫಲ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆಯುಧಗಳನ್ನು ರಾಂಚಿಯ ಮನೆಯೊಂದರಲ್ಲಿ ಅಲ್ಮೇರಾದಲ್ಲಿ ಇರಿಸಲಾಗಿತ್ತು. ಈ ಸ್ಥಳವು ಪ್ರಕರಣದಲ್ಲಿ ಭಾಗಿಯಾಗಿರುವ ಪ್ರೇಮ್ ಪ್ರಕಾಶ್ ಎಂಬ ವ್ಯಕ್ತಿಗೆ ಸೇರಿದ್ದು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ತನಿಖಾ ಸಂಸ್ಥೆಯು ಕಾರ್ಯಾಚರಣೆ ಭಾಗವಾಗಿ ಜಾರ್ಖಂಡ್, ನೆರೆಯ ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಸುಮಾರು 17-20 ಪ್ರದೇಶಗಳಲ್ಲಿ ಇಂದು ದಾಳಿ ನಡೆಸಿದೆ.

ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ ಮತ್ತು ಮಿಶ್ರಾ ಅವರ ಸಹವರ್ತಿ ಮತ್ತು ಬಚ್ಚು ಯಾದವ್ ಅವರನ್ನು ಪ್ರಶ್ನಿಸಿದ ನಂತರ ಲಭ್ಯವಾದ ಮಾಹಿತಿಯ ಮೇರೆಗೆ ಇಂದ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದೆ ಈ ಪ್ರಕರಣದಲ್ಲಿ ಮಿಶ್ರಾ ಮತ್ತು ಯಾದವ್ ಇಬ್ಬರನ್ನೂ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು.

ಅಕ್ರಮ ಗಣಿಗಾರಿಕೆ ಮತ್ತು ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರ್ಖಂಡ್‌ನ ಸಾಹಿಬ್‌ಗಂಜ್, ಬರ್ಹೆತ್, ರಾಜಮಹಲ್, ಮಿರ್ಜಾ ಚೌಕಿ ಮತ್ತು ಬರ್ಹರ್ವಾದಲ್ಲಿ ಜುಲೈ 8 ರಂದು 19 ಸ್ಥಳಗಳ ಮೇಲೆ ದಾಳಿ ಮಾಡಲಾಗಿತ್ತು. ಮಿಶ್ರಾ ಮತ್ತು ಇತರರ ವಿರುದ್ಧ ಮಾರ್ಚ್‌ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇ.ಡಿ ಮೊಕದ್ದಮೆ ದಾಖಲಿಸಿತ್ತು.

ಜುಲೈ ತಿಂಗಳಲ್ಲಿ ನಡೆಸಿದ ದಾಳಿಯ ಬಳಿಕ ಇ.ಡಿ 50 ಬ್ಯಾಂಕ್ ಖಾತೆಗಳ 13.32 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.

'ತನಿಖೆಯ ಸಂದರ್ಭದಲ್ಲಿ ವಿವಿಧ ವ್ಯಕ್ತಿಗಳ ಹೇಳಿಕೆಗಳು, ಡಿಜಿಟಲ್ ಸಾಕ್ಷ್ಯಗಳು ಮತ್ತು ದಾಖಲೆಗಳು ಸೇರಿದಂತೆ ವಶಪಡಿಸಿಕೊಂಡ ನಗದು ಅಥವಾ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಅರಣ್ಯ ಪ್ರದೇಶ ಸೇರಿದಂತೆ ಸಾಹಿಬ್‌ಗಂಜ್ ಪ್ರದೇಶದಲ್ಲಿ ವ್ಯಾಪಕವಾಗಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಪಡೆಯಲಾಗಿದೆ ಎಂದು ತಿಳಿದುಬಂದಿದೆ' ಎಂದು ತನಿಖಾ ಸಂಸ್ಥೆ ಹೇಳಿತ್ತು.

ಜಾರ್ಖಂಡ್‌ನಲ್ಲಿ ಅಕ್ರಮ ಗಣಿಗಾರಿಕೆಯಿಂದ ಪಡೆದಿರುವ 100 ಕೋಟಿ ರೂಪಾಯಿಗಳ 'ಅಕ್ರಮ ಆದಾಯ'ದ ಜಾಡು ಹಿಡಿದು ತನಿಖೆ ನಡೆಸುತ್ತಿರುವುದಾಗಿಯೂ ಅದು ಹೇಳಿದೆ.

SCROLL FOR NEXT