ದೇಶ

ದೇವಸ್ಥಾನಗಳು ಜನರಿಗಾಗಿಯೇ ಹೊರತು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ: ಸ್ಟಾಲಿನ್

Nagaraja AB

ಚೆನ್ನೈ: ದೇವಾಲಯಗಳು ಸಾರ್ವಜನಿಕರಿಗೆ ಮೀಸಲಾಗಿದ್ದು, ಯಾರೊಬ್ಬರ ವೈಯಕ್ತಿಕ ಆಸ್ತಿಯಾಗಲು ಸಾಧ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾನುವಾರ ಪ್ರತಿಪಾದಿಸಿದ್ದಾರೆ.  ಎಲ್ಲಾ ಜಾತಿಗಳಿಂದ ಅರ್ಚಕರ ನೇಮಕ ಸೇರಿದಂತೆ ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ  ಕೈಗೊಂಡ ವಿವಿಧ ಕಲ್ಯಾಣ ಕ್ರಮಗಳನ್ನು ಸಹಿಸಲಾಗದ ಕೆಲವು ಶಕ್ತಿಗಳು ಆಧಾರರಹಿತ ಆರೋಪಗಳ ಮೂಲಕ ಡಿಎಂಕೆ ಸರ್ಕಾರದ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. 

ತಿರುವನ್ಮಿಯೂರಿನ ಅರುಲ್ಮಿಗು ಮರುಂತೀಶ್ವರರ್ ದೇವಾಲಯದಲ್ಲಿ ನಡೆದ 31 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ,  ರಾಜಪ್ರಭುತ್ವವಾಗಲಿ ಅಥವಾ ಪ್ರಜಾಪ್ರಭುತ್ವವಾಗಲಿ, ದೇವಾಲಯಗಳು ಜನರಿಗೆ ಮಾತ್ರ ಇರೋದು.  ಯಾವುದೇ ರೀತಿಯ ಆಡಳಿತವನ್ನು ಲೆಕ್ಕಿಸದೆ ಅವು ಸಾರ್ವಜನಿಕರಿಗೆ ಇವೆ.  ದೇಗುಲಗಳು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ. ವ್ಯಕ್ತಿಗಳ ನಿಯಂತ್ರಣದಲ್ಲಿದ್ದ ದೇವಾಲಯಗಳ ಪರಿಸ್ಥಿತಿ ಬದಲಾಯಿಸಲು ಈ ಇಲಾಖೆಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು. 

ಧಾರ್ಮಿಕ ಕ್ಷೇತ್ರದಲ್ಲಿ ಡಿಎಂಕೆ ಕೊಡುಗೆಗಳನ್ನು ಸ್ಮರಿಸಿದ ಅವರು, ದಿವಂಗತ ಎಂ ಕರುಣಾನಿಧಿ ನೇತೃತ್ವದ ಆಡಳಿತದಲ್ಲಿ ಹೆಚ್ಚಿನ ದೇವಾಲಯಗಳನ್ನು ಸ್ಥಾಪಿಸಲಾಗಿದೆ. 3,700 ಕೋಟಿ ಮೌಲ್ಯದ ಅತಿಕ್ರಮಿತ ದೇವಾಲಯದ ಭೂಮಿಯನ್ನು ಹಿಂಪಡೆದಿದೆ ಮತ್ತು ಸುಧಾರಣಾವಾದಿ ನಾಯಕ 'ಪೆರಿಯಾರ್' ಇ ವಿ ರಾಮಸಾಮಿ  ಅವರ ಆಶಯದಂತೆ  ಮಹಿಳೆಯನ್ನು ಅರ್ಚಕರನ್ನಾಗಿ ನೇಮಿಸಲಾಗಿದೆ. ಎಲ್ಲಾ ಜಾತಿಯ ಪುರುಷರನ್ನು ದೇವಾಲಯದಲ್ಲಿ 'ಅರ್ಚಕರನ್ನಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ಹೇಳಿದರು. 

ಏಕತೆ ವಿರೋಧಿಸುವ ಕೆಲವು ಶಕ್ತಿಗಳು ರಸ್ತೆ ತಡೆ ನಡೆಸುತ್ತಿವೆ ಆದರೆ,  ಸರ್ಕಾರ ಅವುಗಳನ್ನು ಕಾನೂನುಬದ್ಧವಾಗಿ ಎದುರಿಸುತ್ತಿದೆ. ಕೆಲವರಿಗೆ ಇವುಗಳನ್ನು ಸಹಿಸಲು ಆಗುತ್ತಿಲ್ಲ. ಅದಕ್ಕಾಗಿಯೇ ಕೆಸರೆರಚಾಟ, ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ.ಇವರಿಗೆ ರಾಜಕೀಯ ಮಾಡಲು ಏನೂ ಇಲ್ಲ, ಹಾಗಾಗಿ ಧರ್ಮವನ್ನು ಬಳಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ.ಅವರಿಗೆ ಯಾವುದೇ ಪುರಾವೆ ಇಲ್ಲ ಎಂದರು. 

SCROLL FOR NEXT