ಕೋಲ್ಕತ್ತಾ: ಜಲ್ಪೈಗುರಿ ಜಿಲ್ಲೆಯಲ್ಲಿ ಸೋಮವಾರ ಗುವಾಹಟಿಗೆ ಹೋಗುವ ವಾಹನದ ಸ್ಟೆಪ್ನಿಯಲ್ಲಿ (ಸ್ಪೇರ್ ಟೈರ್) 94 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡ ನಂತರ, ಪ್ರಧಾನಿ ನರೇಂದ್ರ ಮೋದಿಯವರ ಜಿ 20 ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುವ ಗಂಟೆಗಳ ಮೊದಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
'ಹಣ, ಗೂಂಡಾಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಿಜೆಪಿಗಾಗಿಯೇ ಸಾಗಿಸಲಾಗುತ್ತಿದೆ. ಆ ಬಗ್ಗೆ ಬಿಜೆಪಿಯವರು ಗಮನಹರಿಸಬೇಕೆಂದು ನಾನು ವಿನಂತಿಸುತ್ತೇನೆ. ರಾಜಕೀಯವಾಗಿ ಹೋರಾಟ ಮಾಡೋಣ. ಈ ರೀತಿಯಲ್ಲಿ ಅಲ್ಲ' ಎಂದು ಹೇಳಿದರು.
ಬಿಹಾರ ಸಾರಿಗೆ ಅಧಿಕಾರಿಗಳು ನೀಡಿದ ನೋಂದಣಿ ಸಂಖ್ಯೆಯ ಎಸ್ಯುವಿಯಲ್ಲಿ ಐವರು ಪ್ರಯಾಣಿಸುತ್ತಿದ್ದರು. ಈ ವಾಹನವನ್ನು ತಪಾಸಣೆ ನಡೆಸಿದಾಗ ಪೊಲೀಸರಿಗೆ 94.38 ಲಕ್ಷ ರೂ. ಇರುವುದು ಪತ್ತೆಯಾಗಿತ್ತು.
'ನಗದು ಸಾಗಣೆ ಬಗ್ಗೆ ನಮಗೆ ನಿರ್ದಿಷ್ಟ ಸುಳಿವು ಸಿಕ್ಕಿತ್ತು. ಬನಾರ್ಹಟ್ನಲ್ಲಿರುವ ಚೆಕ್ಪೋಸ್ಟ್ನ್ಲಿ ನಾವು ಎಲ್ಲಾ ಶಂಕಿತ ವಾಹನಗಳನ್ನು ಪರಿಶೀಲಿಸುತ್ತಿದ್ದೇವೆ. ನಾವು ಎಸ್ಯುವಿಯೊಂದನ್ನು ಅಡ್ಡಗಟ್ಟಿ ವಾಹನವನ್ನು ಹುಡುಕಲು ಪ್ರಾರಂಭಿಸಿದೆವು. ಆರಂಭದಲ್ಲಿ ಏನೂ ಕಂಡುಬರಲಿಲ್ಲ. ಬಳಿಕ ಸ್ಟೆಪ್ನಿಯನ್ನು ಎತ್ತಿಕೊಂಡು ನೋಡಿದಾಗ ಅದರ ತೂಕ ಅಸಹಜವಾಗಿರುವುದು ತಿಳಿಯಿತು. ಬಳಿಕ ನಾವು ಟೈರ್ ತೆರೆಯಲು ಮೆಕ್ಯಾನಿಕ್ ಕರೆಸಿದೆವು ಎಂದು ಜಲ್ಪೈಗುರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಿಸ್ವಜಿತ್ ಮಹತೋ ಹೇಳಿದರು.
500 ಮತ್ತು 200 ರೂಪಾಯಿ ಮುಖಬೆಲೆಯ 94 ಕಟ್ಟುಗಳ ಕರೆನ್ಸಿ ನೋಟುಗಳೊಂದಿಗೆ ಸ್ಟೆಪ್ನಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.