ದೇಶ

ಬಿಜೆಪಿ-ಆರ್ ಎಸ್ಎಸ್ ದ್ವೇಷ ಹರಡುತ್ತದೆ, ಆದರೆ ಭಾರತ ಜನ ಹಾಗಿಲ್ಲ: ದೆಹಲಿಯಲ್ಲಿ ಮಹಾತ್ಮಾ ಗಾಂಧಿ, ಮಾಜಿ ಪ್ರಧಾನಿಗಳ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ

Sumana Upadhyaya

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ಒಂದು ವಾರದ ವಿಶ್ರಾಂತಿ ತೆಗೆದುಕೊಂಡಿದ್ದು, ದೆಹಲಿಗೆ ಆಗಮಿಸಿದ್ದಾರೆ. ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ತೀವ್ರ ಚಳಿಯಿದ್ದು, ಇದರ ಮಧ್ಯೆ ರಾಹುಲ್ ಗಾಂಧಿ ಬಿಳಿ ಟೀ-ಶರ್ಟ್ ಮತ್ತು ಪ್ಯಾಂಟ್‌ ಧರಿಸಿ ಬರಿಗಾಲಿನಲ್ಲಿ ನಡೆದರು.

ಬಳಿಕ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಅವರ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ. 

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಗೊಂಡು ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಹೊರಟಿರುವ ಭಾರತ್ ಜೋಡೋ ಯಾತ್ರೆಯನ್ನು ಉತ್ತರ ಭಾರತದಲ್ಲಿ ಚಳಿಯ ಮಧ್ಯೆ ಮುಂದುವರಿಸಿದ್ದಾರೆ. ನಿನ್ನೆ ಪತ್ರಕರ್ತರು ಚಳಿಯ ಮಧ್ಯೆ ಭಾರತ್ ಜೋಡೋ ಯಾತ್ರೆಯಲ್ಲಿ ಹೇಗೆ ಓಡಾಡುತ್ತೀರಿ ಎಂದು ಕೇಳಿದರು. ಅದಕ್ಕೆ ರಾಹುಲ್ ಗಾಂಧಿ, ನನ್ನಲ್ಲಿ ಚಳಿ ಇದೆ, ಏನು ಮಾಡುತ್ತೀರಿ ಎಂದು ಕೇಳುತ್ತೀರಿ, ಆದರೆ ಈ ದೇಶದ ರೈತರು, ಬಡ ಕಾರ್ಮಿಕರು, ಬಡ ಮಕ್ಕಳಿಗೆ ಕೇಳುತ್ತೀರಾ ಎಂದು ನಗುತ್ತಾ ಪ್ರಶ್ನಿಸಿದರು. 

"ನಾನು 2,800 ಕಿಮೀ ನಡೆದಿದ್ದೇನೆ, ಆದರೆ ಇದು ದೊಡ್ಡ ವಿಷಯವಲ್ಲ. ರೈತರು ಪ್ರತಿದಿನ ತುಂಬಾ ನಡೆಯುತ್ತಾರೆ; ಕೃಷಿ ಕಾರ್ಮಿಕರು, ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಎಷ್ಟು ಕೆಲಸ ಮಾಡುತ್ತಾರೆ, ಅವರಿಗೂ ಕಷ್ಟವಿಲ್ಲವೇ'' ಎಂದು ಕೇಳಿದರು. 

ಯಾತ್ರೆಯು ದೆಹಲಿಯ ಹಂತವನ್ನು ಪೂರ್ಣಗೊಳಿಸುತ್ತಿದ್ದಂತೆ, ಕನ್ಯಾಕುಮಾರಿಯಿಂದ ಎಲ್ಲಾ ದಾರಿಯಲ್ಲಿ ನಾನು ಪ್ರಯಾಣಿಸಿಕೊಂಡು ಹೋಗಿದ್ದೇನೆ, ಆದರೆ ಎಲ್ಲಿಯೂ ನಮ್ಮ ಬಗ್ಗೆ ಸಾಮಾನ್ಯ ಜನರ ದ್ವೇಷ ಕಂಡಿಲ್ಲ. ಜನರಲ್ಲಿ ಭೀತಿಯಿದೆ ಎಂದರು. 

ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷ ಮತ್ತು ಭಯವನ್ನು ಹರಡುತ್ತಿದೆ ಎಂದು ಆರೋಪಿಸಿದ ಅವರು, ನಾನು ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿದಾಗ ಎಲ್ಲೆಡೆ ದ್ವೇಷವಿದೆ ಎಂದು ಭಾವಿಸಿದ್ದೆ. ಆದರೆ ದಾರಿಯುದ್ಧಕ್ಕೂ ಹೋದಾಗ ಅದು ಕಂಡುಬರಲಿಲ್ಲ ನನಗೆ. ಮಾಧ್ಯಮಗಳಲ್ಲಿ ಹಿಂದೂ-ಮುಸ್ಲಿಂ ಎನ್ನುತ್ತೇವೆ. ಆದರೆ ಭಾರತದ ಜನ ಹಾಗಿಲ್ಲ ಎಂದರು.

SCROLL FOR NEXT