ಮುಂಬೈ: ಕಳೆದ ವಾರ ಮಹಾ ಆಘಾದಿ ಸರ್ಕಾರದ ಪತನ ನಂತರ ಶಿವಸೇನಾ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ ಏಕನಾಥ್ ಶಿಂಧೆ ಅವರನ್ನು ಹೊಸ ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ನಾಯಕತ್ವಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ ಹೇಳಿದರು.
ಬಿಜೆಪಿ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಸಿಎಂ ಹುದ್ದೆಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಅಂತಾ ಜನರು ಭಾವಿಸುತ್ತಿದ್ದರು ಆದರೆ 106 ಶಾಸಕರಿದ್ದರೂ ಏಕನಾಥ್ ಶಿಂಧೆಯನ್ನು ಸಿಎಂ ಮಾಡಿದ್ದೇವೆ. ಏಕನಾಥ್ ಶಿಂಧೆ ಯಶಸ್ವಿ ಮುಖ್ಯಮಂತ್ರಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಫಡ್ನವಿಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ ನಂತರ ನಾನು ಉಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದೇನೆ ಪಕ್ಷದ ವರಿಷ್ಠರ ಆದೇಶವೇ ನನಗೆ ಅತ್ಯಂತ ಮಹತ್ವದ್ದಾಗಿದೆ. ನಾನು ಸರ್ಕಾರದ ಭಾಗವಾಗಬೇಕು ಎಂದು ಬಿಜೆಪಿ ನಾಯಕತ್ವ ನಂಬಿದೆ ಎಂದು ಅವರು ಹೇಳಿದರು.
ಶಿಂಧೆ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಫಡ್ನವಿಸ್ಗೆ ಅತೃಪ್ತಿ ತಂದಿದೆ ಎಂಬ ಸುದ್ದಿಗೆ ತೆರೆ ಎಳೆದ ಫಡ್ನವೀಸ್, ನಾನು ಮನವಿ ಮಾಡಿದ್ದರೆ ನಾನು ಮುಖ್ಯಮಂತ್ರಿಯಾಗಬಹುದಿತ್ತು. ಶಿಂಧೆ ಅವರನ್ನು ಸಿಎಂ ಮಾಡಬೇಕೆಂಬುದು ನನ್ನ ಪ್ರಸ್ತಾಪವಾಗಿತ್ತು. ನಾನು ಸರ್ಕಾರದಲ್ಲಿರಬೇಕೆಂದು ಪಕ್ಷದ ಹಿರಿಯ ನಾಯಕರು ಒತ್ತಾಯಿಸಿದರು, ಆದ್ದರಿಂದ ಅವರ ಆದೇಶದ ಮೇರೆಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸಿದ್ದೇನೆ ಎಂದು ಫಡ್ನವೀಸ್ ಹೇಳಿದರು.