ದೇಶ

ವಾಣಿಜ್ಯ ನಗರಿ ಮುಂಬೈಯಲ್ಲಿ ಭಾರೀ ಮಳೆ: ರಸ್ತೆಯಲ್ಲಿ ಪ್ರವಾಹ, ನಾಗರಿಕರ ಅಳಲು

Sumana Upadhyaya

ಮುಂಬೈ: ಕಳೆದ ಎರಡು ದಿನಗಳಿಂದ ವಾಣಿಜ್ಯ ನಗರಿ ಮುಂಬೈಯಲ್ಲಿ ಸತತ ಮಳೆ ಸುರಿಯುತ್ತಿದ್ದು, ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ನೊಂದ ನಾಗರಿಕರು ತಮಗೆ ಪ್ರಯಾಣಿಸಲು ಕಾರಿನ ಬದಲು ದೋಣಿಯ ಅವಶ್ಯಕತೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ರೈಲುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಕೆಲವು ಪ್ರಯಾಣಿಕರು, ಉಪನಗರ ಸೇವೆಗಳು ಸ್ವಲ್ಪ ತಡವಾಗಿ ಆರಂಭವಾಗುತ್ತಿವೆ ಎಂದಿದ್ದಾರೆ. 

ಭಾರತೀಯ ಹವಾಮಾನ ಇಲಾಖೆ (IMD) ಮುಂಬೈ ನಗರ ಮತ್ತು ಉಪನಗರಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಮುಂಬೈ ಮತ್ತೊಂದು ಪ್ರವಾಹಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ, ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ 8 ಗಂಟೆಗೆ ದಕ್ಷಿಣ ಮುಂಬೈಯಲ್ಲಿ ಸರಾಸರಿ 107 ಮಿಮೀ ಮಳೆಯಾದರೆ, ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 172 ಮಿಮೀ ಮತ್ತು 152 ಮಿಮೀ ಮಳೆ ದಾಖಲಾಗಿದೆ. ಕೆಲವು ತಗ್ಗು ಪ್ರದೇಶಗಳು ಮತ್ತು ದಾದರ್ ಮತ್ತು ಸಿಯಾನ್‌ನ ಗಾಂಧಿ ಮಾರುಕಟ್ಟೆ ಮತ್ತು ಸಿಯಾನ್‌ನ ರಸ್ತೆ ಜಲಾವೃತಗೊಂಡಿದ್ದು, ಪಾದಚಾರಿಗಳು ನೀರಿನಲ್ಲಿಯೇ ನಡೆಯಬೇಕಾಗಿದೆ. ವಾಹನ ಸವಾರರಿಗೆ ಪ್ರಯಾಣಿಸಲು ಕಷ್ಟವಾಗಿದೆ. 

ಸಿಯಾನ್, ಮಾಟುಂಗಾ, ದಾದರ್‌ನಲ್ಲಿ ಪ್ರವಾಹ ಉಂಟಾಗಿದೆ. ಪ್ರಯಾಣಿಸಲು ಕಾರಿನ ಬದಲು ದೋಣಿ ಬೇಕು ಎಂದು ನಗರದ ನಿವಾಸಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು  ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

SCROLL FOR NEXT