ನವದೆಹಲಿ: ಸಂಸತ್ ಭವನದ ಆವರಣದಲ್ಲಿ ಇನ್ನೂ ಮುಂದೆ ಮುಷ್ಕರ, ಧರಣಿ, ಸತ್ಯಾಗ್ರಹ ಅಥವಾ ಧಾರ್ಮಿಕ ಸಭೆ, ಸಮಾರಂಭ ನಡೆಸುವಂತಿಲ್ಲ ಎಂದು ರಾಜ್ಯ ಸಭಾ ಸೆಕ್ರೆಟರಿಯೇಟ್ ಹೊರಡಿಸಿರುವ ಹೊಸ ಆದೇಶದಲ್ಲಿ ಹೇಳಲಾಗಿದೆ. ಕಲಾಪದ ಸಂದರ್ಭದಲ್ಲಿ ಕೆಲವೊಂದು ಪದಗಳ ನಿರ್ಬಂಧ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿರುವಂತೆಯೇ ಧರಣಿ ಕುರಿತು ಹೊಸ ಆದೇಶ ಹೊರಬಿದ್ದಿದೆ.
ಜುಲೈ 18 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯಸಭಾ ಸೆಕ್ರೆಟರಿ ಜನರಲ್ ಪಿ. ಸಿ ಮೋದಿ ಈ ಆದೇಶ ಹೊರಡಿಸಿದ್ದು, ಸದಸ್ಯರಿಂದ ಬೆಂಬಲವನ್ನು ಕೋರಲಾಗಿದೆ. ಸದಸ್ಯರು ಸಂಸತ್ ಭವನದ ಆವರಣವನ್ನು ಯಾವುದೇ ರೀತಿಯ ಪ್ರದರ್ಶನ, ಧರಣಿ, ಮುಷ್ಕರ, ಸತ್ಯಾಗ್ರಹ ಅಥವಾ ಧಾರ್ಮಿಕ ಆಚರಣೆಗೆ ಬಳಸುವಂತಿಲ್ಲ ಎಂದು ಬುಲೆಟಿನ್ ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಲೋಕಸಭೆ, ರಾಜ್ಯಸಭೆಯಲ್ಲಿ ಇನ್ಮುಂದೆ 'ಡ್ರಾಮ', 'ಹಿಪೊಕ್ರೆಸಿ', 'ಜೂಮ್ಲಾ ಜೀವಿ', 'ಕರಪ್ಟ್' ನಂತಹ ಪದಬಳಕೆ ಅಸಂಸದೀಯ!
ಈ ಆದೇಶವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭೆ ಮುಖ್ಯ ವಿಪ್ ಜೈರಾಂ ರಮೇಶ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಸಂಸತ್ ಆವರಣದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ, ಸತ್ಯಾಗ್ರಹ ನಡೆಸುತ್ತಿದ್ದರು.