ದೇಶ

ಉತ್ತರ ಪ್ರದೇಶ: ಸೋನಭದ್ರದಲ್ಲಿ ಇಬ್ಬರು ಹಿಂದಿ ಪತ್ರಕರ್ತರ ಮೇಲೆ ಗುಂಡಿನ ದಾಳಿ

Lingaraj Badiger

ಸೋನಭದ್ರ: ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯ ರಾಯ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೆಸ್ಟೋರೆಂಟ್‌ನಲ್ಲಿ ಚಹಾ ಕುಡಿಯುತ್ತಿದ್ದ ಹಿಂದಿ ಪತ್ರಿಕೆಗಳ ಇಬ್ಬರು ಪತ್ರಕರ್ತರ ಮೇಲೆ ಗುಂಡು ಹಾರಿಸಲಾಗಿದೆ.

ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಲ್ಲಿ ಗಾಯಗೊಂಡ ಇಬ್ಬರು ಪತ್ರಕರ್ತರನ್ನು ಬಿಎಚ್‌ಯು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಗುಂಡಿನ ದಾಳಿಗೆ ಒಳಗಾದ ಪತ್ರಕರ್ತರನ್ನು ಶ್ಯಾಮ್ ಸುಂದರ್ ಪಾಂಡೆ ಮತ್ತು ಲಡ್ಡು ಪಾಂಡೆ ಎಂದು ಗುರುತಿಸಲಾಗಿದೆ.

ಇಬ್ಬರು ಪತ್ರಕರ್ತರಾದ ಶ್ಯಾಮ್ ಸುಂದರ್ ಪಾಂಡೆ ಮತ್ತು ಲಡ್ಡು ಪಾಂಡೆ ಅವರು ಕಲಿಯಾರಿ ಮಾರುಕಟ್ಟೆಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಕುಳಿತು ಚಹಾ ಕುಡಿಯುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಪತ್ರಕರ್ತರ ಮೇಲೆ ಎರಡು ಮೂರು ಸುತ್ತು ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸೋನಭದ್ರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್‌ಪಿ) ವಿನೋದ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.

"ಇಲ್ಲಿಯವರೆಗೆ, ಗುಂಡಿನ ದಾಳಿಯ ಹಿಂದಿನ ಉದ್ದೇಶ ಏನು ಎಂಬುದು ಸ್ಪಷ್ಟವಾಗಿಲ್ಲ. ಇಬ್ಬರು ಪತ್ರಕರ್ತರು ಅಪಾಯದಿಂದ ಪಾರಾಗಿದ್ದಾರೆ ಮತ್ತು ನಾವು ಶೀಘ್ರದಲ್ಲೇ ಅವರ ಹೇಳಿಕೆಗಳನ್ನು ದಾಖಲಿಸುತ್ತೇವೆ" ಎಂದು ಸಿಂಗ್ ಹೇಳಿದ್ದಾರೆ.

ಘಟನೆಯಿಂದ ಗಾಬರಿಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

SCROLL FOR NEXT