ದೇಶ

ಸಂಸತ್ತು ಪ್ರಜಾಪ್ರಭುತ್ವದ ದೇಗುಲ, ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ: ರಾಷ್ಟ್ರಪತಿ ಕೋವಿಂದ್ ಬೀಳ್ಕೊಡುಗೆ ಭಾಷಣ!

Srinivasamurthy VN

ನವದೆಹಲಿ: ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಹೇಳಿದ್ದಾರೆ.

ರಾಜ್ಯಸಭಾ ಮತ್ತು ಲೋಕಸಭೆಯ ಸಂಸದರಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಸಮಾರಂಭವು ಸಂಸತ್ತಿನಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ ಬೀಳ್ಗೊಡುಗೆ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದರು. 'ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲಾ ಭಾರತೀಯರಿಗೆ ನನ್ನ ಧನ್ಯವಾದ. 5 ವರ್ಷದ ಹಿಂದೆ ಇದೇ ವೇದಿಕೆಯಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದೆ. ಇದೀಗ ಹಲವು ಸ್ಮರಣೀಯ ನೆನೆಪುಗಳು, ತೃಪ್ತ ಭಾವದಿಂದ ವಿದಾಯ ಹೇಳುತ್ತಿದ್ದೇನೆ. ಎಲ್ಲ ಸಂಸದರಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಸಂಸತ್ತನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆದಿರುವ ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಂಸತ್ತಿನಲ್ಲಿ ಚರ್ಚೆ ಮತ್ತು ಭಿನ್ನಾಭಿಪ್ರಾಯದ ಹಕ್ಕುಗಳನ್ನು ಚಲಾಯಿಸುವಾಗ ಗಾಂಧಿ ತತ್ವವನ್ನು ಅನುಸರಿಸುವಂತೆ ಸಂಸದರಿಗೆ ಸೂಚಿಸಿದರು ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. 

ಕೋವಿಡ್ ಮಹಾಮಾರಿ ವಿರುದ್ಧ ಭಾರತ ಶಕ್ತವಾಗಿ ಹೋರಾಟ ಮಾಡಿದೆ. ಅತ್ಯಲ್ಪ ಸಮಯದಲ್ಲಿ 200 ಕೋಟಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿ ಪಡಿಸಿ, ಸೋಂಕು ನಿಯಂತ್ರಿಸಿದ್ದೇವೆ. ಇದರಿಂದ ಭವಿಷ್ಯದಲ್ಲಿ ಎದುರಾಗಲು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾರ್ಗಸೂಚಿಯನ್ನು ನಿರ್ಮಿಸಲಾಗಿದೆ. ಇದು ಅಭಿನಂದನೆಗೆ ಅರ್ಹ. ಕೋವಿಡ್ ಮಹಾಮಾರಿಯಿಂದಾಗಿ ಜಗತ್ತು ಸಂಕಷ್ಟದಲ್ಲಿದೆ. ಸಾಂಕ್ರಾಮಿಕ ರೋಗದಿಂದ ನಾವು ಪಾಠಗಳನ್ನು ಕಲಿಯುತ್ತೇವೆ ಎಂದು ನಾನು ಭಾವಿಸುತ್ತೇನೆ, ನಾವೆಲ್ಲರೂ ಪ್ರಕೃತಿಯ ಭಾಗ ಎಂಬುದನ್ನು ನಾವು ಮರೆತಿದ್ದೇವೆ. ಕಷ್ಟದ ಸಮಯದಲ್ಲಿ, ಭಾರತದ ಪ್ರಯತ್ನಗಳನ್ನು ಪ್ರಪಂಚದಾದ್ಯಂತ ಶ್ಲಾಘಿಸಲಾಗಿದೆ ಎಂದು ಕೋವಿಂದ್ ಹೇಳಿದ್ದಾರೆ.

ಇದೇ ವೇಳೆ ಹಳ್ಳಿ ಹಳ್ಳಿಯ ಮನಗೆ ಶುದ್ಧ ಕುಡಿಯು ನೀರನ್ನು ಒದಗಿಸಲಾಗಿದೆ. ಈ ಮೂಲಕ ಪ್ರತಿಯೊಬ್ಬ ನಾಗರೀಕನಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಪ್ರತಿ ಮನೆಗೆ ಶೌಚಾಲಯ ಸೌಲಭ್ಯವನ್ನೂ ಕೇಂದ್ರ ಸರ್ಕಾರ ಒದಗಿಸುತ್ತಿದೆ. ಉಡಾನ್ ಯೋಜನೆಯಡಿಯಲ್ಲಿ ವಿಮಾನ ನಿಲ್ದಾಣ, ವಿಮಾನ ಪ್ರಯಾಣವನ್ನು ದೇಶದ ಮೂಲೆ ಮೂಲೆಗೂ ವಿಸ್ತರಿಸಲಾಗಿದೆ. ಇದೆಲ್ಲವೂ ಸರ್ಕಾರದ ಅವಿರತ ಪರಿಶ್ರಮದ ಫಲಾವಾಗಿದೆ. ದೇಶದ ಪ್ರತಿಯೊಬ್ಬ ಮಗುವಿಗೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ರಾಷ್ಟ್ಪೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ.  ಹಲವು ಯೋಜನೆಗಳು ಭಾರತೀಯರ ಬದುಕಿನ ಮಟ್ಟವನ್ನು ಉನ್ನತೀಕರಿಸಿದೆ ಎಂದು ಹೇಳಿದರು.

ರಾಷ್ಟ್ರಪತಿ ಅವಧಿಯಲ್ಲಿ ಎರಡು ಮಹತ್ವದ ಹಾಗೂ ಸ್ಮರಣೀಯ ಕಾರ್ಯಕ್ರಮ ನಡಿದೆ. ಒಂದು 150ನೇ ವರ್ಷದ ಮಹಾತ್ಮಾ ಗಾಂಧಿ ಜಯಂತಿ ಆಚರಣೆ ಹಾಗೂ 75ನೇ ವರ್ಷದ ಅಮೃತಮಹೋತ್ಸವ ಕಾರ್ಯಕ್ರಮ. ಎರಡೂ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಯೋಜಿಸಿದ ಸರ್ಕಾರಕ್ಕೆ ಕೋವಿಂದ್ ಧನ್ಯವಾದ ಹೇಳಿದ್ದಾರೆ. 

ಅಂತೆಯೇ ರಾಷ್ಟ್ರಪತಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ದ್ರೌಪದಿ ಮುರ್ಮುಗೆ ಅಭಿನಂದನೆ ಸಲ್ಲಿಸಿದ ರಾಮನಾಥ್ ಕೋವಿಂದ್, ಅವರ ಮಾರ್ಗದರ್ಶನದಿಂದ ದೇಶಕ್ಕೆ ಪ್ರಯೋಜನವಾಗಲಿದೆ ಎಂದು ಶುಭಕೋರಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಎಲ್ಲರಿಗೂ ನನ್ನ ಧನ್ಯವಾದಗಳು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ಕೋವಿಂದ್ ಧನ್ಯವಾದ ಹೇಳಿದರು.

SCROLL FOR NEXT