ದೇಶ

ನ್ಯಾಷನಲ್ ಹೆರಾಲ್ಡ್ ಪ್ರಕರಣ: 9 ಗಂಟೆ ವಿಚಾರಣೆ ಬಳಿಕ ನಾಳೆಯೂ ರಾಹುಲ್ ಗಾಂಧಿಗೆ ಇಡಿ ಡ್ರಿಲ್!

Vishwanath S

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಇಂದು ಒಂಬತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು. ಇದೀಗ ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. 

ಮೊದಲ ಬಾರಿಗೆ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ ಇಂದು ಬೆಳಗ್ಗೆ 11.10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಇಡಿ ಕಚೇರಿಯಲ್ಲಿಯೇ ಇದ್ದರು. ವಿಚಾರಣೆ ಮಧ್ಯೆ 80 ನಿಮಿಷಗಳ ಕಾಲ ವಿರಾಮ ನೀಡಲಾಗಿತ್ತು.

ರಾಹುಲ್ ಗಾಂಧಿ ಇಡಿ ವಿಚಾರಣೆ ಕುರಿತಂತೆ ದೆಹಲಿ ಮತ್ತು ರಾಜ್ಯ ರಾಜಧಾನಿಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ರಣದೀಪ್ ಸುರ್ಜೆವಾಲಾ ಮತ್ತು ಕೆ ಸಿ ವೇಣುಗೋಪಾಲ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಪಕ್ಷದ ಬೃಹತ್ ಶಕ್ತಿ ಪ್ರದರ್ಶನದ ಬಳಿಕ ಅವರನ್ನು ಬಂಧಿಸಲಾಯಿತು. 

ವಿರೋಧ ಪಕ್ಷವು ತನ್ನ ಕೆಲವು ನಾಯಕರನ್ನು ಪೊಲೀಸರು ಅಮಾನುಷವಾಗಿ ನಡೆಸಿಕೊಂಡಿದ್ದು ಶಾಂತಿಯುತ ಪ್ರತಿಭಟನೆಗಳಿಗೆ 'ಅನುಮತಿ ನೀಡುತ್ತಿಲ್ಲ' ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ ತಿರುಗೇಟು ನೀಡಿದ್ದು, ಕೈ ನಾಯಕರು ಇಡಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ಗಾಂಧಿ ಕುಟುಂಬದ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

'ರಾಹುಲ್ ಗಾಂಧಿ ಏನು ಕಾನೂನಿಗಿಂತ ಮೇಲಲ್ಲ ಎಂದು ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಜಕೀಯ ಕುಟುಂಬವು ತನ್ನ 'ಅಕ್ರಮ'ವನ್ನು ರಕ್ಷಿಸಲು ವಿಮೋಚನೆಗಾಗಿ ತನಿಖಾ ಸಂಸ್ಥೆಯನ್ನು ಹಿಡಿದಿಟ್ಟುಕೊಳ್ಳುವ ಇಂತಹ ಅಬ್ಬರದ ಪ್ರಯತ್ನವನ್ನು ಹಿಂದೆಂದೂ ಮಾಡಿರಲಿಲ್ಲ ಎಂದು ಹೇಳಿದ್ದಾರೆ. 
 

SCROLL FOR NEXT