ದೇಶ

ಪ್ರವಾದಿ ಕುರಿತ ಹೇಳಿಕೆ ವಿವಾದ: ಉತ್ತರ ಪ್ರದೇಶದಲ್ಲಿನ ಹಿಂಸಾಚಾರಕ್ಕಾಗಿ 337 ಪ್ರತಿಭಟನಾಕಾರರ ಬಂಧನ

Nagaraja AB

ಲಖನೌ: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ವಿರೋಧಿಸಿ ಜೂನ್ 10 ರಂದು ನಡೆದ ಪ್ರತಿಭಟನೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಎಂಟು ಜಿಲ್ಲೆಗಳಿಂದ ಇಲ್ಲಿಯವರೆಗೂ ಸುಮಾರು 337 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜಿಲ್ಲೆಗಳಲ್ಲಿ 13 ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.  ಈ 337 ಜನರ ಪೈಕಿ ಪ್ರಯಾಗ್ ರಾಜ್ ನಿಂದ 92, ಶಹರನ್ ಪುರದಿಂದ 83, ಹರ್ತಾಸ್ ನಿಂದ 52, ಅಂಬೇಡ್ಕರ್ ನಗರದಿಂದ 41, ಮೊರಾದಾಬಾದ್ ನಿಂದ 40, ಫಿರೋಜ್ ಬಾದ್ ನಿಂದ 18, ಅಲಿಘಡದಿಂದ ಆರು, ಜಲೌನ್ ನಿಂದ ಐವರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದಾಖಲಾಗಿರುವ 13 ಕೇಸ್ ಗಳ ಪೈಕಿ ಪ್ರಯಾಗ್ ರಾಜ್ ಮತ್ತು ಶಹರನ್ ಪುರದಿಂದ ಮೂರು, ಫಿರೋಜಾಬಾದ್, ಅಂಬೇಡ್ಕರ್ ನಗರ, ಮೊರಾದಾಬಾದ್, ಹರ್ತಾಸ್, ಅಲಿಘಡ. ಲಖೀಂಪುರ್ ಕೇರಿ ಮತ್ತು ಜಲೌನ್ ನಿಂದ ತಲಾ ಒಂದೊಂದು ಕೇಸ್ ದಾಖಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಜೂನ್ 10 ರಂದು ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಯಾಗ್ ರಾಜ್ ಹಾಗೂ ಶಹರನ್ ಪುರದಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆಯಲ್ಲಿ ಉದ್ರಿಕ್ತ ಗುಂಪು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರು.
 

SCROLL FOR NEXT