ದೇಶ

ಆಸ್ತಿ ವಿವಾದ: ಜಡ್ಜ್ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Vishwanath S

ಮುಂಬೈ: ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಧೀಶರು ತಮ್ಮ ಮನವಿಯನ್ನು ತಿರಸ್ಕರಿಸಿದ ನಂತರ 55 ವರ್ಷದ ವ್ಯಕ್ತಿಯೊಬ್ಬ ಶುಕ್ರವಾರ ಬಾಂಬೆ ಹೈಕೋರ್ಟ್‌ನ ಕೊಠಡಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 

ಆದರೆ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ಸಕಾಲದಲ್ಲಿ ಅವರನ್ನು ತಡೆದಿದ್ದಾರೆ. ನ್ಯಾಯಮೂರ್ತಿ ಪಿ ಡಿ ನಾಯ್ಕ್ ಅವರ ಕೋರ್ಟ್ ರೂಂನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ತನ್ನ ತಾಯಿಯೊಂದಿಗೆ ಆಸ್ತಿ ವಿವಾದದಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಹಿರಿಯ ನಾಗರಿಕರ ಕಾಯ್ದೆಯಡಿ ತನ್ನ ನಿವೇಶನವನ್ನು ಖಾಲಿ ಮಾಡುವಂತೆ ನ್ಯಾಯಾಧೀಶರು ಆದೇಶಿಸಿದರು. ನ್ಯಾಯಮೂರ್ತಿ ನಾಯಕ್ ಆದೇಶವನ್ನು ಪ್ರಕಟಿಸುತ್ತಿದ್ದಂತೆ, ಆ ವ್ಯಕ್ತಿ ತನ್ನ ಪ್ಯಾಂಟ್ ಜೇಬಿನಿಂದ ಪೇಪರ್ ಕಟ್ಟರ್ ಚಾಕುವನ್ನು ಹೊರತೆಗೆದು ತನ್ನ ಮಣಿಕಟ್ಟನ್ನು ಸೀಳಿಕೊಳ್ಳಲು ಪ್ರಯತ್ನಿಸಿದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೇರಿದಂತೆ ಅವರ ಸುತ್ತಲಿದ್ದ ಕೆಲವು ವಕೀಲರು ತಕ್ಷಣ ಆತನನ್ನು ತಡೆದರು. ನ್ಯಾಯಾಲಯಕ್ಕೆ ಬಂದ ಪೊಲೀಸ್ ಸಿಬ್ಬಂದಿ ಆತನನ್ನು ಆಜಾದ್ ಮೈದಾನ ಪೊಲೀಸ್ ಠಾಣೆಗೆ ಕರೆದೊಯ್ದರು.ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ವೈದ್ಯಕೀಯ ನೆರವು ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಕೀಲರ ಪ್ರಕಾರ ಹೈಕೋರ್ಟ್‌ನ ಎರಡು ಪ್ರವೇಶ ದ್ವಾರಗಳಲ್ಲಿ ಲೋಹ ಶೋಧಕಗಳು ಸ್ವಲ್ಪ ಸಮಯದವರೆಗೆ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ವೇಳೆ ಬಹುಷಃ ಆ ವ್ಯಕ್ತಿ ಪೇಪರ್ ಕಟ್ಟರ್‌ನೊಂದಿಗೆ ಆವರಣವನ್ನು ಪ್ರವೇಶಿಸರಬಹುದು ಎಂದಿದ್ದಾರೆ.

SCROLL FOR NEXT