ದೇಶ

ಅಸ್ಸಾಂ-ಮೇಘಾಲಯದಲ್ಲಿ ಪ್ರವಾಹ, ಭೂಕುಸಿತಕ್ಕೆ 20 ಮಂದಿ ಬಲಿ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

Sumana Upadhyaya

ಗುವಾಹಟಿ: ಅಸ್ಸಾಂ ಮತ್ತು ಮೇಘಾಲಯದಲ್ಲಿ ಶುಕ್ರವಾರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದೆ. ಅಸ್ಸಾಂನಲ್ಲಿ ಏಳು ಮಂದಿ ಮೃತಪಟ್ಟರೆ, ಉಳಿದ 13 ಮಂದಿ ಮೇಘಾಲಯದ ನಿವಾಸಿಗಳು.

ಕಳೆದ ರಾತ್ರಿ 8ರವರೆಗೆ ಉಂಟಾದ ಪ್ರವಾಹದ ಮಾಹಿತಿಯ ಪ್ರಕಾರ, 22 ಜಿಲ್ಲೆಗಳು ಮತ್ತು 11,03,026 ಜನರು ಮಳೆಯಿಂದ ಬಾಧಿತರಾಗಿದ್ದಾರೆ. ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಇದರೊಂದಿಗೆ ಮೇ ತಿಂಗಳಿನಿಂದ ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಇದುವರೆಗೆ 52 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 20,141.99 ಹೆಕ್ಟೇರ್‌ನಲ್ಲಿನ ಬೆಳೆ ಹಾನಿಯಾಗಿದೆ. ಬ್ರಹ್ಮಪುತ್ರ, ಕೊಪಿಲಿ, ಜಿಯಾ ಭಾರಾಲಿ, ಪುತಿಮರಿ, ಮಾನಸ್ ಮತ್ತು ಬೇಕಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗುವಾಹಟಿ, ರಂಗಿಯಾ ಮತ್ತು ನಲ್ಬರಿಯ ಹಲವಾರು ಪ್ರದೇಶಗಳು ಜಲಾವೃತವಾಗಿವೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಇತರ ಏಜೆನ್ಸಿಗಳ ಜೊತೆಗೆ, ನಿರಾಶ್ರಿತ ಜನರನ್ನು ರಕ್ಷಿಸುವ ಮತ್ತು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿವೆ. ಪೂರ್ವ ಖಾಸಿ ಹಿಲ್, ಸೌತ್ ವೆಸ್ಟ್ ಖಾಸಿ ಹಿಲ್ಸ್ ಮತ್ತು ಸೌತ್ ಗಾರೋ ಹಿಲ್ಸ್ ಎಂಬ ಮೂರು ಜಿಲ್ಲೆಗಳಿಂದ ಸಾವುಗಳು ವರದಿಯಾಗಿವೆ. ಘಟನೆಯೊಂದರಲ್ಲಿ ಅಪ್ರಾಪ್ತ, ವಯಸ್ಕ ಸೇರಿದಂತೆ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಹಲವಾರು ರಸ್ತೆಗಳು ಹಾಳಾಗಿವೆ ಅಥವಾ ಕೊಚ್ಚಿ ಹೋಗಿವೆ. ಮೇಘಾಲಯದಲ್ಲಿ ಭೂಕುಸಿತದ ನಂತರ ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಿಂದ ಬರಾಕ್ ಕಣಿವೆಗೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಾದೇಶಿಕ ಹವಾಮಾನ ಕೇಂದ್ರವು ಈಶಾನ್ಯ ಭಾಗಗಳಲ್ಲಿ ಗುಡುಗು ಮಿಂಚು ಮತ್ತು ಅತ್ಯಂತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.

SCROLL FOR NEXT