ದೇಶ

ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ದೆಹಲಿಯತ್ತ ಪಯಣ: ಎಲ್ಲರಿಂದ ಸಹಕಾರ ಕೋರಿದ ದ್ರೌಪದಿ ಮುರ್ಮು

Sumana Upadhyaya

ಭುವನೇಶ್ವರ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ದೇಶದ ಮೊದಲ ಪ್ರಜೆಯನ್ನು ಆಯ್ಕೆ ಮಾಡಲು ಎಲ್ಲರಿಂದ ಸಹಕಾರ ಕೋರಿರುವ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು(Draupadi Murmu), ಜುಲೈ 18ಕ್ಕೆ ಮುನ್ನ ಎಲ್ಲ ಮತದಾರರನ್ನು ಭೇಟಿಯಾಗಿ ಬೆಂಬಲ ಕೋರುವುದಾಗಿ ಹೇಳಿದ್ದಾರೆ.

ಮುರ್ಮು ಅವರು ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 9.40 ಕ್ಕೆ ವಿಮಾನದಲ್ಲಿ ದೆಹಲಿಗೆ ತೆರಳಿದರು. ಆಕೆಯ ಸ್ನೇಹಿತರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಕೆಯನ್ನು ನೋಡಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರಿಂದ ಬುಡಕಟ್ಟು ನೃತ್ಯವನ್ನು ಆಯೋಜಿಸಲಾಗಿತ್ತು.

ದಾರಿಯುದ್ದಕ್ಕೂ ಜನರ ಹರ್ಷೋದ್ಗಾರಗಳು ಮತ್ತು ಶುಭಾಶಯಗಳ ನಡುವೆ ರಸ್ತೆಯ ಮೂಲಕ 280 ಕಿಮೀ ದೂರವನ್ನು ಕ್ರಮಿಸಿದ ನಂತರ ಅವರು ನಿನ್ನೆ ರಾತ್ರಿ ಮಯೂರ್‌ಭಂಜ್ ಜಿಲ್ಲೆಯ ತನ್ನ ಸ್ಥಳೀಯ ರಾಯರಂಗ್‌ಪುರ ಪಟ್ಟಣದಿಂದ ಒಡಿಶಾ ರಾಜಧಾನಿಯನ್ನು ತಲುಪಿದ್ದರು.

ರಾಷ್ಟ್ರ ರಾಜಧಾನಿಗೆ ಹೊರಡುವ ಮುನ್ನ ನೀಡಿದ ಹೇಳಿಕೆಯಲ್ಲಿ ಮುರ್ಮು, "ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುವುದಲ್ಲದೆ ಅಧ್ಯಕ್ಷೀಯ ಚುನಾವಣೆಗೆ ಎಲ್ಲರಿಂದ ಸಹಕಾರವನ್ನು ಕೋರುತ್ತೇನೆ. ಜುಲೈ 18ಕ್ಕೆ ಮೊದಲು ಎಲ್ಲಾ ಶಾಸಕರನ್ನು ಭೇಟಿ ಮಾಡಿ ಸಹಕಾರ ಕೋರುತ್ತೇನೆ ಎಂದರು.

ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯ(president candidate) ಮುರ್ಮು ಅವರ ಏಕೈಕ ಪುತ್ರಿ ಇತಿಶ್ರೀ ಮುರ್ಮು ಮಾತನಾಡಿ, ‘ನನ್ನ ತಾಯಿಯ ಸರಳತೆ ಮತ್ತು ಮೃದು ಸ್ವಭಾವದಿಂದ ದೇಶದ ಜನರು ಪ್ರೀತಿಸುತ್ತಾರೆ, ಕುಟುಂಬದ ಜವಾಬ್ದಾರಿಯನ್ನು ನನಗೆ ಒಪ್ಪಿಸಿ ದೇಶ ಸೇವೆ ಮಾಡಲು ಹೊರಟಿದ್ದಾರೆ ಎಂದರು. 

ಇತಿಶ್ರೀ ಮುರ್ಮು ಅವರು ಭುವನೇಶ್ವರದಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದು, ಪ್ರಸ್ತುತ ತಮ್ಮ ಎರಡು ತಿಂಗಳ ಮಗಳನ್ನು ನೋಡಿಕೊಳ್ಳಲು ಹೆರಿಗೆ ರಜೆಯಲ್ಲಿದ್ದಾರೆ. ದ್ರೌಪದಿ ಮುರ್ಮು ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸಮೀರ್ ಮೊಹಾಂತಿ ಮತ್ತು ಸ್ಥಳೀಯ ಸಂಸದೆ ಅಪರಾಜಿತಾ ಸಾರಂಗಿ ಅವರು ಭುವನೇಶ್ವರದಲ್ಲಿ ಅತಿಥಿ ಗೃಹದಲ್ಲಿ ಬರಮಾಡಿಕೊಂಡರು, ಅಲ್ಲಿ ಅವರು ಕಳೆದ ರಾತ್ರಿ ಕಳೆದಿದ್ದರು. 

SCROLL FOR NEXT