ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಇಂದು ನಾಮಪತ್ರ ಸಲ್ಲಿಸಿರುವ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದು, ಅವರ ಪಕ್ಷಗಳಿಂದ ಬೆಂಬಲವನ್ನು ಕೋರಿದ್ದಾರೆ. ಮಿತ್ರ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರು ಸ್ಪರ್ಧಿಸಲಿದ್ದಾರೆ.
ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಇಂದು ಚುನಾವಣಾಧಿಕಾರಿ ಪಿ ಸಿ ಮೋದಿ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಪ್ರಧಾನಿ ಮೋದಿ ಸೇರಿ ಉನ್ನತ ನಾಯಕರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಪಿಯೂಷ್ ಗೋಯಲ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಬಿಎಸ್ ಬೊಮ್ಮಾಯಿ, ಭೂಪೇಂದ್ರ ಪಟೇಲ್, ಹಿಮಂತ ಬಿಸ್ವಾ ಶರ್ಮಾ, ಪುಷ್ಕರ್ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಮುರ್ಮು ಅವರ ಜೊತೆಯಲ್ಲಿದ್ದರು.
ಎನ್ಡಿಎ ನಾಯಕರಲ್ಲದೆ, ಮೈತ್ರಿಕೂಟದ ಭಾಗವಾಗಿರದ ವೈಎಸ್ಆರ್ ಕಾಂಗ್ರೆಸ್ನ ವಿ ವಿಜಯಸಾಯಿ ರೆಡ್ಡಿ ಮತ್ತು ಬಿಜೆಡಿ ನಾಯಕ ಸಸ್ಮಿತ್ ಪಾತ್ರಾ ಕೂಡ ದ್ರೌಪದಿ ಮುರ್ಮು ಅವರ ನಾಮನಿರ್ದೇಶನವನ್ನು ಬೆಂಬಲಿಸಲು ಸಂಸತ್ತಿನಲ್ಲಿದ್ದರು. ಎಐಎಡಿಎಂಕೆ ನಾಯಕ ಓ ಪನೀರ್ಸೆಲ್ವಂ ಮತ್ತು ಎಂ ತಂಬಿದುರೈ, ಜೆಡಿಯುನ ರಾಜೀವ್ ರಂಜನ್ ಸಿಂಗ್ ಕೂಡ ಬೇಗನೇ ಸಂಸತ್ತು ತಲುಪಿದ್ದರು.