ಗುವಾಹಟಿ: ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನಾ ನಾಯಕ ಏಕನಾಥ್ ಶಿಂಧೆ ಆರು ದಿನಗಳ ನಂತರ ಇದೇ ಮೊದಲ ಬಾರಿಗೆ ಪತ್ರಕರ್ತರ ಎದುರು ಮಂಗಳವಾರ ಕಾಣಿಸಿಕೊಂಡರು. ಬ್ಲಾಕ್ ಶೂ ಹಾಗೂ ಶ್ವೇತವರ್ಣಧಾರಿಯಾಗಿ ಯಾರೊಂದಿಗೊ ಮೊಬೈಲ್ ನಲ್ಲಿ ಮಾತನಾಡುತ್ತಾ ರಾಡಿಸನ್ ಬ್ಲೂ ಹೋಟೆಲ್ ನಿಂದ ಏಕನಾಥ್ ಶಿಂಧೆ ಹೊರಗೆ ಬಂದರು.
ಬುಧವಾರದಿಂದ ಹೋಟೆಲ್ ನ ಮುಖ್ಯ ಪ್ರವೇಶದ್ವಾರದಿಂದ 150 ಮೀಟರ್ ದೂರದಲ್ಲಿ ಶಿವಸೇನೆಯಲ್ಲಿನ ಬೆಳವಣಿಗೆ ಕುರಿತಂತೆ ಸುದ್ದಿ ಮಾಡುತ್ತಿರುವ ಪತ್ರಕರ್ತರನ್ನು ಭೇಟಿಯಾದ ಏಕನಾಥ್ ಶಿಂಧೆ, ಪಕ್ಷದ ವಕ್ತಾರ ದೀಪಕ್ ಕೆಸರ್ಕರ್ ಎಲ್ಲಾ ವಿವರಗಳನ್ನು ನೀಡುವುದಾಗಿ ಹೇಳಿದರು.
ಇದನ್ನೂ ಓದಿ: ಮುಂಬೈಗೆ ಬಂದು ನನ್ನೊಂದಿಗೆ ಮಾತನಾಡಿ': ಗುವಾಹಟಿಯಲ್ಲಿರುವ ಬಂಡಾಯ ಶಿವಸೇನಾ ಶಾಸಕರಿಗೆ ಉದ್ಧವ್ ಠಾಕ್ರೆ ಮನವಿ
''ನಮ್ಮ ಪಾತ್ರ ಮತ್ತು ನಿಲುವಿನ ಬಗ್ಗೆ ಪಕ್ಷದ ವಕ್ತಾರ ದೀಪಕ್ ಕೆಸರ್ಕರ್ ನಿರಂತರವಾಗಿ ಮಾಹಿತಿ ನೀಡುತ್ತಿದ್ದಾರೆ. ಬಾಳ ಸಾಹೇಬ್ ಠಾಕ್ರೆ ಹಿಂದೂತ್ವ ಮತ್ತು ಶಿವಸೇನೆ ಮುನ್ನಡೆಸುವ ಬಗ್ಗೆ ಮಾತನಾಡಿದ್ದೇವೆ. ಅದರಲ್ಲಿ ಯಾವುದೇ ಗೊಂದಲ್ಲ ಇಲ್ಲ ಎಂದು ಶಿಂಧೆ ಸ್ಪಷ್ಟಪಡಿಸಿದರು. ನಮ್ಮ ಮುಂದಿನ ಹೆಜ್ಜೆ ಏನು ಎಂಬ ಬಗ್ಗೆ ನಿರ್ಧರಿಸಿದ ನಂತರ ನಿಮಗೆ ಮಾಹಿತಿ ನೀಡುತ್ತೇವೆ ಎಂದರು.
ಶಿಂಧೆ ಮತ್ತು ಶಿವಸೇನಾ ಬಂಡಾಯ ಶಾಸಕರು ಗುರುವಾರ ಮುಂಬೈಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಏಕನಾಥ್ ಶಿಂಧೆ ದೆಹಲಿಗೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿವೆ. ಹಿಂದೂತ್ವ ರಕ್ಷಣೆ ಅವರ ಪ್ರಮುಖ ಹೋರಾಟವಾಗಿದೆ. ಅದನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ಅವರು ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.