ಗುವಾಹಟಿ (ಅಸ್ಸಾಂ): ನಾಳೆ ಮುಂಬೈಗೆ ತೆರಳಲಿದ್ದು, ಬಹುಮತ ಸಾಬೀತು ಪಡಿಸಿ ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸುತ್ತೇನೆಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ.
ನಾಲ್ವರು ಭಿನ್ನಮತೀಯ ಶಾಸಕರೊಂದಿಗೆ ಇಂದು ಬೆಳಗ್ಗೆ ಏಕನಾಥ್ ಶಿಂಧೆಯವರು ಗುವಾಹಟಿಯ ಪ್ರಸಿದ್ಧ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರದ ಶಾಂತಿ ಹಾಗೂ ಸಂತೋಷಕ್ಕಾಗಿ ಪ್ರಾರ್ಥನೆ ಮಾಡಲು ನಾನಿಲ್ಲಿಗೆ ಬಂದಿದ್ದೇನೆ. ನಾಳೆ ಮುಂಬೈಗೆ ತೆರಳಲಿದ್ದು, ಬಹುಮತ ಸಾಬೀತುಪಡಿಸುತ್ತೇನೆ. ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸುತ್ತೇನೆಂದು ಹೇಳಿದರು.
ನಿನ್ನೆ ಹೇಳಿಕೆ ನೀಡಿದ್ದ ಏಕನಾಥ್ ಶಿಂಧೆ. 50ಕ್ಕೂ ಹೆಚ್ಚು ಶಾಸಕರ ಬೆಂಬಲ ನನಗಿದ್ದು, ಶೀಘ್ರದಲ್ಲೇ ಮುಂಬೈಗೆ ಮರಳುತ್ತೇನೆ, ಬಾಳಾ ಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆಂದು ಹೇಳಿದ್ದರು.
ಇದನ್ನೂ ಓದಿ: 'ಮಹಾ' ರಾಜಕೀಯ ಬಿಕ್ಕಟ್ಟು: ಮುಂಬೈ ಹೋಟೆಲ್'ಗೆ ಬರುವಂತೆ ಶಾಸಕರಿಗೆ ಬಿಜೆಪಿ ಸೂಚನೆ, ಬಂಡಾಯ ನಾಯಕರು ಗೋವಾಗೆ ಶಿಫ್ಟ್
ಈ ನಡುವೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಬಹುಮತವನ್ನು ಸಾಬೀತುಪಡಿಸುವಂತೆ ಸೂಚಿಸಿದ್ದಾರೆ. ಸಂಜೆ 5 ವೇಳೆಗೆ ವಿಶ್ವಾಸ ಮತಯಾಚನೆ ಪೂರ್ಣಗೊಳಿಸುವಂತೆಯೂ ಸೂಚಿಸಿದ್ದಾರೆಂದು ತಿಳಿದುಬಂದಿದೆ,
ಈ ಎಲ್ಲಾ ಬೆಳವಣಿಗೆ ನಡುವೆ ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ 8 ಸ್ವತಂತ್ರ ಶಾಸಕರೊಂದಿಗೆ ಮಹಾರಾಷ್ಟ್ರ ರಾಜ್ಯಪಾಲರಿಗೆ ಪತ್ರವನ್ನು ಸಲ್ಲಿಸಿದ್ದು, ಕೂಡಲೇ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.