ದೇಶ

ರಾಜಸ್ಥಾನ ಸರ್ವಪಕ್ಷ ಸಭೆಯಲ್ಲಿ ಟೈಲರ್ ಹತ್ಯೆಗೆ ತೀವ್ರ ಖಂಡನೆ: ಕನ್ಹಯ್ಯಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ

Manjula VN

ಜೈಪುರ: ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿದ ಕೃತ್ಯವನ್ನು ರಾಜಸ್ಥಾನ ವಿಧಾನಸಭೆಯ ಸರ್ವಪಕ್ಷ ಸದಸ್ಯರು ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಅವರು ಕನ್ಹಯ್ಯ ಅವರ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಿನ್ನೆ ಗೆಹ್ಲೋಟ್ ಅವರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಸಭೆಯಲ್ಲಿ ಇದೊಂದು ಭಯೋತ್ಪಾದನೆಯ ಕೃತ್ಯ. ಹಂತಕರಿಗೆ ಅಂತರರಾಷ್ಟ್ರೀಯ ಉಗ್ರ ಸಂಘಟನೆಗಳ ಜೊತೆಗಿರುವ ಸಂಬಂಧಗಳ ಬಗ್ಗೆ ತನಿಖೆ ನಡೆಸಬೇಕು. ವಿಳಂಬಿಸದೆ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ನಡುವೆ ಇಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ರಾಜಸ್ಥಾನ ಸಿಎಂ ಗೆಹ್ಲೋಟ್ ಅವರು, ಶಾಂತಿ ಮತ್ತು ಸಂಯಮ ಕಾಪಾಡುವಂತೆ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. 

ಘಟನೆಗೆ ಸಂಬಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವು ತನಿಖೆ ನಡೆಸುತ್ತಿದೆ. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತ್ತು ರಾಜಸ್ಥಾನ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯಾಚರಣಾ ತಂಡ (ಎಸ್‍‌ಒಜಿ)ವು ಎನ್‌ಐಎ ಜೊತೆ ತನಿಖೆಗೆ ಸಹಕರಿಸುತ್ತಿವೆ ಎಂದು ತಿಳಿಸಿದ್ದಾರೆ.

SCROLL FOR NEXT