ದೇಶ

ಪಾಕಿಸ್ತಾನದ ಉಗ್ರ ಸೇರಿ ಮೂವರು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

Ramyashree GN

ಶ್ರೀನಗರ: ಭದ್ರತಾ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವಂತಿಪೋರಾದಲ್ಲಿ ಮೂವರು ಲಷ್ಕರ್-ಎ-ತೊಯ್ಬಾದ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಕ್ಷಣಾ ಸಚಿವಾಲಯದ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಖಂಡಿಪೋರಾ, ಅವಂತಿಪೋರಾದ ಸಾಮಾನ್ಯ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ವಾಹನದಲ್ಲಿ ಓಡಾಡುವ ಖಚಿತ ಮಾಹಿತಿಯನ್ನು ಪಡೆದಿದ್ದರು. ಅದರಂತೆ ಸೇನೆ ಮತ್ತು ಪೊಲೀಸರು ಮಂಗಳವಾರ ಸಂಜೆ ಜಂಟಿ ಸಂಚಾರಿ ವಾಹನ ಚೆಕ್ ಪೋಸ್ಟ್ ಸ್ಥಾಪಿಸಿದ್ದಾರೆ.

ಈ ವೇಳೆ ನಡೆದ ಜಂಟಿ ಕಾರ್ಯಾಚರಣೆಯಲ್ಲಿ, ಸಂಜೆ 7:15ರ ಸುಮಾರಿಗೆ ಚೆಕ್ ಪೋಸ್ಟ್ ಬಳಿ ಅನುಮಾನಾಸ್ಪದ ವಾಹನ ಬರುತ್ತಿರುವುದನ್ನು ಗಮನಿಸಲಾಗಿದೆ. ವಾಹನವನ್ನು ತಡೆದ ಬಳಿಕ, ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಈ ವೇಳೆ ಪ್ರತಿದಾಳಿ ನಡೆಸಿದ ತಂಡವು, ಓರ್ವ ಉಗ್ರನನ್ನು ಎನ್‌ಕೌಂಟರ್ ಮಾಡಿದೆ. ಆದರೆ, ಇತರ ಇಬ್ಬರು ಪಕ್ಕದ ಹೊಲಗಳಿಗೆ ಓಡಿಹೋಗಿದ್ದಾರೆ.

ಓಡಿಹೋದ ಉಗ್ರರನ್ನು ಹಿಡಿಯಲು ಭದ್ರತಾ ಪಡೆಗಳು ಶೋಧಕಾರ್ಯಾಚರಣೆಯನ್ನು ಮುಂದುವರಿಸಿದವು ಮತ್ತು ಆ ಪ್ರದೇಶವನ್ನು ಸುತ್ತುವರಿಯಲಾಯಿತು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರೂ ಉಗ್ರರನ್ನು ಎನ್‌ಕೌಂಟರ್ ಮಾಡಿದ್ದಾರೆ.

ಎನ್‌ಕೌಂಟರ್ ಸ್ಥಳದಿಂದ ಎರಡು ಎಕೆ ಸರಣಿಯ ರೈಫಲ್‌ಗಳು, ಒಂದು ಪಿಸ್ತೂಲ್ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಪ್ರಕಾರ, ಎಲ್ಲಾ ಮೂವರು ಭಯೋತ್ಪಾದಕರು ಎಲ್‌ಇಟಿಗೆ ಸೇರಿದವರಾಗಿದ್ದು, ಓರ್ವನನ್ನು ಪಾಕಿಸ್ತಾನದ ನಿವಾಸಿ ಅಲಿ ಅಲಿಯಾಸ್ ಮುಬಾಸಿರ್ ಮತ್ತು ಪುಲ್ವಾಮಾ ನಿವಾಸಿಗಳಾದ ಮುಖ್ತಾರ್ ಅಹ್ಮದ್ ಭಟ್ ಮತ್ತು ಸಕ್ಲೇನ್ ಮುಷ್ತಾಕ್ ಎಂದು ಗುರುತಿಸಲಾಗಿದೆ.

SCROLL FOR NEXT