ದೇಶ

ಹಿಮಾಚಲ ಪ್ರದೇಶದಲ್ಲಿ ನ.12 ರಂದು ಚಲಾಯಿಸುವ ಪ್ರತಿ ಮತವು ಮುಂದಿನ 25 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸೂಚಿಸುತ್ತದೆ: ಪ್ರಧಾನಿ

Ramyashree GN

ಸುಂದರನಗರ: ಹಿಮಾಚಲ ಪ್ರದೇಶದ ಜನರು ಬಿಜೆಪಿಯನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಗುಡ್ಡಗಾಡು ರಾಜ್ಯದಲ್ಲಿ ತ್ವರಿತ ಪ್ರಗತಿ ಮತ್ತು ಸ್ಥಿರ ಸರ್ಕಾರ ಅಗತ್ಯ ಎಂದು ಹೇಳಿದರು.

'ನವೆಂಬರ್ 12 ರಂದು ಚಲಾವಣೆಯಾಗುವ ಮತಗಳು ಮುಂಬರುವ ಐದು ವರ್ಷಗಳಿಗಷ್ಟೇ ಅಲ್ಲ. ಇದೇ ಕಾರಣಕ್ಕಾಗಿಯೇ ಈ ಬಾರಿಯ ಹಿಮಾಚಲ ಚುನಾವಣೆ ವಿಶೇಷವಾಗಿದೆ ಎಂದು ಅವರು ಹೇಳಿದರು.

ಮಂಡಿ ಜಿಲ್ಲೆಯ ಸುಂದರನಗರದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್ 12 ರಂದು ಚಲಾವಣೆಯಾಗುವ ಪ್ರತಿಯೊಂದು ಮತವೂ ಮುಂದಿನ 25 ವರ್ಷಗಳ ರಾಜ್ಯದ ಅಭಿವೃದ್ಧಿಯ ಪಯಣವನ್ನು ವ್ಯಾಖ್ಯಾನಿಸುತ್ತದೆ ಎಂದರು.

ತಮ್ಮ ತವರು ಜಿಲ್ಲೆ ಮಂಡಿಯಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಕೂಡ ಮಾತನಾಡಿದರು.

'ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿವೆ. ಭಾರತವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸಿದಾಗ, ಅದಕ್ಕೆ ಹತ್ತಿರದಲ್ಲಿ ಹಿಮಾಚಲ ಪ್ರದೇಶವು ತನ್ನ ರಚನೆಯ 100 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಆದ್ದರಿಂದ, ಮುಂದಿನ 25 ವರ್ಷಗಳು ಅತ್ಯಂತ ನಿರ್ಣಾಯಕವಾಗಿರಲಿವೆ' ಎಂದು ಪ್ರಧಾನಿ ತಿಳಿಸಿದರು.

ಹಿಮಾಚಲ ಪ್ರದೇಶದಲ್ಲಿ ಕ್ಷಿಪ್ರ ಪ್ರಗತಿ ಮತ್ತು ಸ್ಥಿರ ಸರ್ಕಾರವನ್ನು ಸಾಧಿಸುವುದು ಅಗತ್ಯ ಎಂದು ಒತ್ತಿ ಹೇಳಿದ ಮೋದಿ, 'ಹಿಮಾಚಲದ ಜನರು, ಅದರ ಯುವಕರು, ತಾಯಂದಿರು ಮತ್ತು ಸಹೋದರಿಯರು ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ನನಗೆ ಸಂತೋಷವಾಗಿದೆ' ಎಂದು ಹೇಳಿದರು.

ಬಿಜೆಪಿ ಸ್ಥಿರತೆ, 'ಸೇವಾ ಭಾವನೆ', 'ಸಮಭಾವ' ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂಬುದು ಜನರಿಗೆ ತಿಳಿದಿದೆ. ಹೀಗಾಗಿ ಹಿಮಾಚಲ ಪ್ರದೇಶದ ಜನತೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದರು.

SCROLL FOR NEXT