ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಅಪ್ರೂವರ್ ಆಗಲು ಸಿಸೋಡಿಯಾ ಸಹಾಯಕ ದಿನೇಶ್ ನಿರ್ಧಾರ

Lingaraj Badiger

ನವದೆಹಲಿ: ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ಮತ್ತು ದೆಹಲಿಯ ಅಬಕಾರಿ ನೀತಿ ಹಗರಣದ ಆರೋಪಿ ದಿನೇಶ್ ಅರೋರಾ ಅವರು ಪ್ರಕರಣದಲ್ಲಿ ಅಪ್ರೂವರ್(ಮಾಫಿ ಸಾಕ್ಷಿದಾರ) ಆಗಲು ನಿರ್ಧರಿಸಿದ್ದು, ದೆಹಲಿ ಡಿಸಿಎಂಗೆ ಹೊಸ ಸಂಕಷ್ಟ ಎದುರಾಗಿದೆ.

ಸದ್ಯ ನಿರೀಕ್ಷಣಾ ಜಾಮೀನು ಪಡೆದಿರುವ ಅರೋರಾ ಅವರನ್ನು ಪ್ರಕರಣದಲ್ಲಿ ಮಾಫಿ ಸಾಕ್ಷಿದಾರರನ್ನಾಗಿ ಮಾಡಲು ಸಿಬಿಐ ನ್ಯಾಯಾಲಯದಿಂದ ಅನುಮತಿ ಕೋರಿದೆ. ಅಲ್ಲದೆ ಅವರ ಜಾಮೀನು ಅರ್ಜಿಗೆ ತನಿಖಾ ಸಂಸ್ಥೆ ವಿರೋಧಿಸಿಲ್ಲ.

"ಅರೋರಾ ಅವರು ಇತರ ಸಹ-ಆರೋಪಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಕೆಲವು ಮದ್ಯದ ಪರವಾನಗಿಗಳಿಂದ ಸಂಗ್ರಹಿಸಲಾದ ಅನಗತ್ಯ ಹಣದ ಲಾಭವನ್ನು ನಿರ್ವಹಿಸುವಲ್ಲಿ ಮತ್ತು ವಾಪಸ್ ನೀಡುವಲ್ಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ ಆ ಹಣದ ಫಲಾನುಭವಿಯಾಗಿರಲಿಲ್ಲ ಮತ್ತು ತನಿಖೆಗೆ ಅರೋರಾ ಸಹಕರಿಸಿದರು" ಎಂದು ಸಿಬಿಐ ಹೇಳಿದೆ.

ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ದೆಹಲಿ ಲೆಪ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಈ ಸಂಬಂಧ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಮನೀಶ್ ಸಿಸೋಡಿಯಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

SCROLL FOR NEXT