ನವದೆಹಲಿ: ಕೇಸರಿ ಪಕ್ಷದ ಭಾಷೆಯಲ್ಲೇ ಮಾತನಾಡುತ್ತಿರುವ ಸುಕೇಶ್ ಚಂದ್ರಶೇಖರ್ ಅವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿಯು ಚಂದ್ರಶೇಖರ್ ಅವರನ್ನು ಸ್ಟಾರ್ ಪ್ರಚಾರಕನಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬಿಜೆಪಿ ನನ್ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒತ್ತಾಯಿಸುತ್ತದೆ ಮತ್ತು ಸುಕೇಶ್ ಚಂದ್ರಶೇಖರ್ ಕೂಡ ಅದೇ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅವರು ಅದೇ ಭಾಷೆಯನ್ನು ಮಾತನಾಡುತ್ತಾರೆ. ಬಿಜೆಪಿಗೆ ಸೇರಲು ಸಂಪೂರ್ಣವಾಗಿ ತರಬೇತಿ ಪಡೆದಿದ್ದಾರೆ' ಎಂದು ಕೇಜ್ರಿವಾಲ್ ಹೇಳಿದರು.
ಮೋದಿಜಿಯವರ ರೋಡ್ಶೋಗಳು ಜನರನ್ನು ಸೆಳೆಯುತ್ತಿಲ್ಲ ಎಂದು ನಾನು ಕೇಳಿದ್ದೇನೆ. ಅವರು ಆ ರೋಡ್ಶೋಗಳಿಗೆ ಸುಕೇಶ್ ಚಂದ್ರಶೇಖರ್ ಅವರನ್ನು ಕರೆತರಬೇಕು. ಆತ ಜನರನ್ನು ಹೇಗೆ ವಂಚಿಸಿದರು ಎಂಬುದಕ್ಕೆ ಅವರ ಬಳಿಕ ಸಾಕಷ್ಟು ಕಥೆಗಳನ್ನು ಹೊಂದಿದ್ದಾರೆ. ಜನರು ಆತನನ್ನು ವೀಕ್ಷಿಸಲು ಮತ್ತು ಕಥೆ ಕೇಳಲು ಬರುತ್ತಾರೆ. ಹೀಗಾಗಿ ಆತನನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ: ನಾನು ದೇಶದ ಅತಿದೊಡ್ಡ ವಂಚಕನಾಗಿದ್ದರೆ, ನನ್ನಿಂದ 50 ಕೋಟಿ ರೂ. ಏಕೆ ಸ್ವೀಕರಿಸಿದಿರಿ?; ಕೇಜ್ರಿವಾಲ್ಗೆ ಸುಕೇಶ್ ಚಂದ್ರಶೇಖರ್
ಸುಕೇಶ್ ಚಂದ್ರಶೇಖರ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಹಲವು ಪತ್ರಗಳನ್ನು ಬರೆದಿದ್ದಾರೆ. ಕೇಜ್ರಿವಾಲ್ ಮತ್ತು ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಭ್ರಷ್ಟಾಚಾರ ಮತ್ತು ಸುಲಿಗೆ ಆರೋಪ ಮಾಡಿದ್ದಾರೆ. ಹಲವು ದಿನಗಳಿಂದ ಕೇಜ್ರಿವಾಲ್ ಮತ್ತು ಸುಕೇಶ್ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.