ದೇಶ

ದೆಹಲಿ ಅಬಕಾರಿ ನೀತಿ: ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಇನ್ನೂ ಇಬ್ಬರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ

Ramyashree GN

ನವದೆಹಲಿ: ಭ್ರಷ್ಟಾಚಾರದ ಆರೋಪದ ನಂತರ ರದ್ದುಪಡಿಸಲಾದ ದೆಹಲಿ ಅಬಕಾರಿ ನೀತಿಯಲ್ಲಿ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಉದ್ಯಮಿಗಳಾದ ವಿಜಯ್ ನಾಯರ್ ಮತ್ತು ಅಭಿಷೇಕ್ ಬೋಯಿನಪಲ್ಲಿ ಅವರನ್ನು ಇ.ಡಿ ಬಂಧಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಇದೇ ಪ್ರಕರಣದಲ್ಲಿ ಈ ಇಬ್ಬರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ್ದು, ಸದ್ಯ ಇಬ್ಬರೂ ಜೈಲಿನಲ್ಲಿದ್ದಾರೆ. ಆದರೆ, ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ವಿಶೇಷ ನ್ಯಾಯಾಲಯದಿಂದ ಇಬ್ಬರನ್ನು ಕಸ್ಟಡಿಗೆ ಕೋರಲಿದೆ ಎಂದು ಅವರು ಹೇಳಿದರು.

ಹೈದರಾಬಾದ್ ಮೂಲದ ಅಭಿಷೇಕ್ ಬೋಯಿನಪಲ್ಲಿ ಮದ್ಯದ ಬೆಲೆ ಅಥವಾ ಷೇರು ಹಂಚಿಕೆಯ ನಿಯಂತ್ರಣ ಹಾಗೂ ದಕ್ಷಿಣದ ಉದ್ಯಮಿಗಳಿಗಾಗಿ ಲಾಬಿ ನಡೆಸುತ್ತಿದ್ದರು ಎಂದು ಎಂದು ಸಿಬಿಐ ತಿಳಿಸಿದೆ.

ಸಿಬಿಐ ಪ್ರಕಾರ, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮಾಜಿ ಸಿಇಒ ವಿಜಯ್ ನಾಯರ್ ಆಮ್ ಆದ್ಮಿ ಪಾರ್ಟಿ (ಎಎಪಿ) ಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಇತರರೊಂದಿಗೆ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಹಾಗೂ 2021-2022ರ ದೆಹಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಪಿತೂರಿಯನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದೆ.

ಇಡಿ ಈ ಹಿಂದೆ ಮದ್ಯದ ಕಂಪನಿ ಇಂಡೋಸ್ಪಿರಿಟ್‌ನ ಪ್ರವರ್ತಕ ಸಮೀರ್ ಮಹಂದ್ರು, ಮದ್ಯದ ಕಂಪನಿಯಾದ ‘ಪೆರ್ನೋಡ್ ರಿಕಾರ್ಡ್‌’ನ ಜನರಲ್ ಮ್ಯಾನೇಜರ್ ಬೆನಾಯ್ ಬಾಬು ಮತ್ತು ಅರಬಿಂದೋ ಫಾರ್ಮಾದ ನಿರ್ದೇಶಕ ಮತ್ತು ಪ್ರವರ್ತಕ ಪಿ ಶರತ್ ಚಂದ್ರ ರೆಡ್ಡಿ ಅವರನ್ನು ಬಂಧಿಸಿತ್ತು. ಇವರು ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದೂ ಹೇಳಲಾಗಿದೆ.

ಈ ಪ್ರಕರಣದಲ್ಲಿ ಈವರೆಗೆ ಇ.ಡಿ 169 ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿದೆ.

ಸಿಬಿಐ ದಾಖಲಿಸಿರುವ ಎಫ್ಐಆರ್ ಆಧಾರದ ಮೇಲೆ ಇ.ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಕೈಗೊಂಡಿದೆ. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಆರೋಪಿ ಸಿಬಿಐ ಹೆಸರಿಸಿದೆ.

ಪ್ರಕರಣ ದಾಖಲಾದ ನಂತರ ಸಿಸೋಡಿಯಾ ಮತ್ತು ದೆಹಲಿ ಸರ್ಕಾರದ ಕೆಲವು ಅಧಿಕಾರಿಗಳ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.

SCROLL FOR NEXT