ದೇಶ

ಭಾರಿ ಮಳೆ: ನದಿ ತೀರದಲ್ಲಿ ವಾಸಿಸುವವರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ ತಮಿಳುನಾಡು ಸರ್ಕಾರ

Ramyashree GN

ಚೆನ್ನೈ: ರಾಜ್ಯದಲ್ಲಿ ಭಾನುವಾರದಿಂದ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಜಲಾಶಯಗಳಿಂದ ನೀರನ್ನು ಹೊರಬಿಡಲಾಗುವುದರಿಂದ ನದಿಗಳ ದಡದಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ತಮಿಳುನಾಡು ಕಂದಾಯ ಇಲಾಖೆ ಸೂಚಿಸಿದೆ.

121 ವಿವಿಧೋದ್ದೇಶ ಸೈಕ್ಲೋನ್ ಶೆಲ್ಟರ್‌ಗಳು ಮತ್ತು 5,093 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ರಾಜ್ಯ ಕಂದಾಯ ಇಲಾಖೆ ತಿಳಿಸಿದೆ.

ಚೆಂಬರಂಬಾಕ್ಕಂ ಸರೋವರದಿಂದ ಶನಿವಾರ 912 ಕ್ಯೂಸೆಕ್ ಮತ್ತು ರೆಡ್ ಹಿಲ್ಸ್ ಜಲಾಶಯದಿಂದ 677 ಕ್ಯೂಸೆಕ್ ನೀರನ್ನು ಹೊರಬಿಡಲಾಗಿರುವುದನ್ನು ಗಮನಿಸಬಹುದು. ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಡಳಿತ ಮಂಡಳಿ ಸೂಚಿಸಿದೆ.

ಅತಿವೃಷ್ಟಿಯಿಂದ ಉಂಟಾಗಿರುವ ಯಾವುದೇ ತೊಂದರೆಗಳ ನಿರ್ವಹಣೆಗಾಗಿ ಚೆನ್ನೈಗೆ 17 ನಿಗಾ ಅಧಿಕಾರಿಗಳನ್ನು ಮತ್ತು ಇತರ ಜಿಲ್ಲೆಗಳಿಗೆ 43 ಮೇಲ್ವಿಚಾರಣಾ ಅಧಿಕಾರಿಗಳನ್ನು ನೇಮಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶವು ಪಶ್ಚಿಮ, ವಾಯುವ್ಯ ದಿಕ್ಕಿನ ಕಡೆಗೆ ಚಲಿಸುವ ಸಾಧ್ಯತೆಯಿದ್ದು, ತಮಿಳುನಾಡಿನ ಚೆಂಗಲ್ಪಟ್ಟು, ವಿಲ್ಲುಪುರಂ, ಮತ್ತು ಕಡಲೂರು ಜಿಲ್ಲೆಗಳಲ್ಲಿ ಭಾನುವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಚೆನ್ನೈನಲ್ಲೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಕಂದಾಯ ಇಲಾಖೆಯು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಮತ್ತು ಇತರ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಾಗರೂಕರಾಗಿರಲು ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

SCROLL FOR NEXT