ದೇಶ

ಶ್ರದ್ಧಾ ಹತ್ಯೆ ಪ್ರಕರಣ ಆಕಸ್ಮಿಕ ಎಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್; ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ

Ramyashree GN

ಜೈಪುರ: ದೆಹಲಿಯಲ್ಲಿ ತನ್ನ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದವನಿಂದ ಹತ್ಯೆಯಾದ ಶ್ರದ್ಧಾ ವಾಕರ್ ಘಟನೆಯನ್ನು 'ಆಕಸ್ಮಿಕ' ಎಂದು ಕರೆದಿದ್ದಕ್ಕಾಗಿ ರಾಜಸ್ಥಾನದ ಬಿಜೆಪಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದೆ.

ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, 'ಅಲ್ಲೊಂದು ಘಟನೆ ನಡೆದಿದೆ. ಆ ಘಟನೆ ಆಕಸ್ಮಿಕವಾಗಿದೆ. ಶತಮಾನಗಳಿಂದಲೂ ಅಂತರ್ಜಾತಿ, ಅಂತರ್ ಧರ್ಮದ ಹೆಸರಿನಲ್ಲಿ ವಿವಾಹಗಳು ನಡೆಯುತ್ತಿವೆ. ಇದು ಹೊಸ ವಿಷಯವಲ್ಲ' ಎಂದಿದ್ದರು.

'ನೀವು (ಬಿಜೆಪಿ) ಒಂದು ಸಮುದಾಯ, ಒಂದು ಧರ್ಮವನ್ನು ಗುರಿಯಾಗಿಸಿಕೊಂಡಿದ್ದೀರಿ ಮತ್ತು ಅದರ ಆಧಾರದ ಮೇಲೆ ನಿಮ್ಮ ರಾಜಕೀಯ ದೇಶದೊಳಗೆ ನಡೆಯುತ್ತಿದೆ. ನೀವು ಅದರ ಪ್ರಯೋಜನಗಳನ್ನು ಪಡೆಯುತ್ತೀರಿ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಒಟ್ಟುಗೂಡಿಸುವುದು, ಗುಂಪುಗಳನ್ನು ಸೃಷ್ಟಿಸುವುದು ತುಂಬಾ ಸುಲಭ. ಬೆಂಕಿ ಹಚ್ಚುವುದು ಸುಲಭ, ಬೆಂಕಿ ನಂದಿಸುವುದು ತುಂಬಾ ಕಷ್ಟ. ಕಟ್ಟಡ ನಿರ್ಮಿಸಲು ಸಮಯ ಹಿಡಿಯುತ್ತದೆ. ಆದರೆ, ಅದನ್ನು ಕೆಡವಲು ಕೇವಲ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ' ಎಂದಿದ್ದರು.

ಗೆಹ್ಲೋಟ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, 'ಇಂತಹ ಭೀಕರ ಘಟನೆಯನ್ನು ಸಹ ಸಾಮಾನ್ಯ ವಿದ್ಯಮಾನ ಎಂದು ಕರೆಯಬಹುದು ಮತ್ತು ಅದರ ನಂತರ ನೀಡಲಾದ ವಾದಗಳು ತರ್ಕದಿಂದ ಕೂಡಿರಬಹುದು ಆದರೆ, ಕುತರ್ಕದಿಂದ ಕೂಡಿರಬಾರದು' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಮನಃಸ್ಥಿತಿಯ ಕದನವಾಗಿದೆ. ಇದು ಯಾವ ರೀತಿಯಲ್ಲಿ ಲವ್ ಜಿಹಾದ್, ಧಾರ್ಮಿಕ ಮತಾಂತರವನ್ನು ಯೋಜಿತ ಷಡ್ಯಂತ್ರದ ಮೂಲಕ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತಿದೆ. ಇದು ಯಾರಿಗಾದರೂ ಹೆಚ್ಚು ಪರಿಣಾಮ ಬೀರಿದ್ದರೆ ಅದು ರಾಜಸ್ಥಾನವಾಗಿದೆ. ಒಂದು ವೇಳೆ ರಾಜ್ಯದ ಗೃಹ ಸಚಿವರು ಇಂತಹ ಹೇಳಿಕೆ ನೀಡಿದರೆ, ಅದು ಅತ್ಯಂತ ಬೇಜವಾಬ್ದಾರಿ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು.

'ಶ್ರದ್ಧಾ ಹತ್ಯೆ ಪ್ರಕರಣದ ಭಾವನೆಯು ಮುಖ್ಯಮಂತ್ರಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತೋರುತ್ತದೆ. ಇದಕ್ಕೆ ವಿರುದ್ಧವಾಗಿ, ಇದು ಸಾಮಾನ್ಯ ಘಟನೆ ಎಂದು ಮುಖ್ಯಮಂತ್ರಿಗಳು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಪೂನಿಯಾ ಹೇಳಿದರು.

ಗೆಹ್ಲೋಟ್ ಅವರ ಹೇಳಿಕೆಯನ್ನು ಖಂಡಿಸಿರುವ ರಾಜ್‌ಸಮಂದ್ ಬಿಜೆಪಿ ಸಂಸದ ದಿಯಾ ಕುಮಾರಿ ಮಾತನಾಡಿ, 'ಇದು ಹಿಂದೂ ಧರ್ಮದ ಮೇಲಿನ ದಾಳಿ. ಇದು ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಹಿಂಸಾತ್ಮಕ ಅಪರಾಧಗಳ ಪ್ರಚಾರಕ್ಕೆ ಕಾರಣವಾಗುತ್ತದೆ. ರಾಜಸ್ಥಾನದ ಮುಖ್ಯಮಂತ್ರಿಯ ಇಂತಹ ಘಟನೆಗಳ ಸಮರ್ಥನೆ ಖಂಡನೀಯ' ಎಂದು ಹೇಳಿದ್ದಾರೆ.

SCROLL FOR NEXT