ನವದೆಹಲಿ: ತಮ್ಮ ಅಧಿಕಾರಾವಧಿಯಲ್ಲಿ ಎರಡು ಕಡತಗಳನ್ನು ತೆರವುಗೊಳಿಸಲು 300 ಕೋಟಿ ರೂ. ಆಮಿಷ ನೀಡಲಾಗಿತ್ತು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಜಮ್ಮು, ಕಾಶ್ಮೀರ ಮತ್ತು ಮೇಘಾಲಯ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಶನಿವಾರ ಸಿಬಿಐ ವಿಚಾರಣೆಗೆ ಒಳಪಡಿಸಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರ ನೌಕರರ ಆರೋಗ್ಯ ವಿಮಾ ಯೋಜನೆಯ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡುವಲ್ಲಿ ಮತ್ತು 2017-18ರಲ್ಲಿ 60 ಕೋಟಿ ರೂಪಾಯಿ ಬಿಡುಗಡೆ ಅವ್ಯವಹಾರದ ಬಗ್ಗೆ ಮಲಿಕ್ ಅವರು ಆರೋಪಿಸಿದ ನಂತರ ಸಿಬಿಐ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ.
ಇದನ್ನು ಓದಿ: 'ಅಂಬಾನಿ', 'ಆರ್ಎಸ್ಎಸ್-ಸಂಬಂಧಿತ ವ್ಯಕ್ತಿ'ಯಿಂದ ನನಗೆ 300 ಕೋಟಿ ರೂ. ಲಂಚದ ಆಮಿಷ ಬಂದಿತ್ತು: ಸತ್ಯಪಾಲ್ ಮಲಿಕ್
ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ಗಾಗಿ 2019 ರಲ್ಲಿ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಸಂಸ್ಥೆಗೆ 2,200 ಕೋಟಿ ರೂಪಾಯಿ ಮೌಲ್ಯದ ಸಿವಿಲ್ ಕಾಮಗಾರಿ ಗುತ್ತಿಗೆ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡನೇ ಪ್ರಕರಣ ದಾಖಲಿಸಿದೆ.
ಮಲಿಕ್ ಅವರು ಆಗಸ್ಟ್ 2018 ಮತ್ತು ಅಕ್ಟೋಬರ್ 2019 ರ ನಡುವೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು.
ಏಪ್ರಿಲ್ನಲ್ಲಿ ಹಿರಿಯ ಐಎಎಸ್ ಅಧಿಕಾರಿ ನವೀನ್ ಚೌಧರಿ ಅವರ ನಿವಾಸ ಸೇರಿದಂತೆ ದೇಶದ 14 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು. ಜಮ್ಮು, ಶ್ರೀನಗರ, ಮುಂಬೈ, ನೋಯ್ಡಾ, ದೆಹಲಿ, ತಿರುವನಂತಪುರ ಮತ್ತು ದರ್ಭಾಂಗದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ.